ಉಳ್ಳಾಲ (ದ.ಕ.): ತಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಐವರು ಶಾಸಕರಿದ್ದರು. ಕೆಲವು ಬೆಳವಣಿಗೆಗಳಿಂದ ಪಕ್ಷ ಕ್ಷೀಣಿಸಿದೆ, ಇಲ್ಲಿಂದಲೇ ಮತ್ತೆ ಪಕ್ಷ ಬೆಳೆಸುವ ಅಭಿಲಾಷೆಯಿಂದ ಸ್ವಾಭಿಮಾನ ಅಭಿಯಾನವನ್ನು ದ.ಕ.ಜಿಲ್ಲೆಯಿಂದಲೇ ಆರಂಭಿಸಲಾಗುತ್ತಿದೆ. ಪಕ್ಷದ ಗತವೈಭವ ಮರುಕಳಿಸಲಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.
ಜಾತ್ಯತೀತ ಜನತಾದಳದ ಸ್ವಾಭಿಮಾನ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಇಷ್ಟೊಂದು ಮಟ್ಟದಲ್ಲಿ ದ್ವೇಷದ ವಾತಾವರಣ ಸೃಷ್ಟಿಯಾಗಬಾರದಿತ್ತು. ಎರಡು ರಾಷ್ಟ್ರೀಯ ಪಕ್ಷಗಳು ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನಾರಾಯಣ ಗುರುಗಳ ಸಂದೇಶ ಸಮಾಜಕ್ಕೆ ನೆಮ್ಮದಿಯ ಜೀವನ ಸಾಗಿಸಲು ಪೂರಕ. ಆದರೆ ಕೇಂದ್ರ ಸರ್ಕಾರ ಅವರನ್ನು ಗೌರವಿಸದೆ ಅನ್ಯಾಯ ಮಾಡಿರುವುದು ಬೇಸರ ತಂದಿದೆ ಎಂದರು.
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅಕ್ಷರ ಸಂತ ಹರೇಕಳ ಹಾಜಬ್ಬ ಹಾಗೂ ಜಲ ಸೈನಿಕ ಮಹಾಲಿಂಗ ನಾಕ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಮಾಜಿ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ, ಮಹಿಳಾ ಘಟಕ ಅಧ್ಯಕ್ಷೆ ಸುಮತಿ ಹೆಗ್ಡೆ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಡಾ.ಅಮರಶ್ರೀ ಅಮರನಾಥ ಶೆಟ್ಟಿ, ನಗರಸಭಾ ಸದಸ್ಯರಾದ ಅಬ್ದುಲ್ ಜಬ್ಬಾರ್, ಬಶೀರ್ ಉಳ್ಳಾಲ್, ಮುಷ್ತಾಕ್ ಪಟ್ಲ, ಯು.ಎಚ್.ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಸ್ವಾಗತಿಸಿದರು. ನಜೀರ್ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾಶಿವ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
ಬುದ್ಧಿಮಾತು ಹೇಳಿದ ಮಾಜಿ ಸಚಿವರ ಪುತ್ರಿ!
ಪ್ರಥಮ ಬಾರಿಗೆ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಂಡ ಮಾಜಿ ಸಚಿವ ಅಮರನಾಥ ಶೆಟ್ಟಿ ಅವರ ಪುತ್ರಿ ಅಮಶ್ರೀ, ತಮ್ಮ ಮೊದಲ ರಾಜಕೀಯ ಭಾಷಣದಲ್ಲೇ ಮಾಜಿ ಪ್ರಧಾನಿಗೆ ಬುದ್ಧಿಮಾತು ಹೇಳಿ ಕಾರ್ಯಕರ್ತರ ಚಪ್ಪಾಳೆ ಗಿಟ್ಟಿಸಿಕೊಂಡರು. ಬಿಜೆಪಿ-ಮೈತ್ರಿ ಮಾಡಿಕೊಂಡಿದ್ದು ತಪ್ಪು ನಿರ್ಧಾರವಾಗಿತ್ತು. ಇದರಿಂದಾಗಿ ಅಧಿಕಾರವೇ ಇಲ್ಲದ ಬಿಜೆಪಿ ಬೆಳೆದು, ನಮ್ಮ ಪಕ್ಷ ಸೊರಗಿತು. ಮುಂದಕ್ಕೆ ಯಾವುದೇ ತೀರ್ಮಾನ ಕೈಗೊಳ್ಳುವುದಾದರೂ, ದಕ್ಷಿಣ ಕನ್ನಡ ಜಿಲ್ಲೆಯ ನಾಯಕರೊಂದಿಗೆ ಚರ್ಚಿಸಿ, ಯಾಕೆಂದರೆ ಕರಾವಳಿಯ ರಾಜಕೀಯವೇ ಬೇರೆ. ಉತ್ತರ ಕನ್ನಡದ ರಾಜಕೀಯ ಇಲ್ಲಿ ನಡೆಯೋದಿಲ್ಲ. ಮುಂದಕ್ಕಾದರೂ ಒಗ್ಗಟ್ಟಾಗಿ ಹೋಗಿ ಎಂದರು.