ಚನ್ನಗಿರಿ: ಮರಗಳು ನೀಡುವಂತ ಆಮ್ಲಜನಕ ಮನುಕುಲದ ಜೀವನಾಡಿಯಾಗಿದೆ. ಸ್ವಾರ್ಥ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಮರಗಿಡಗಳನ್ನು ಕಡಿದು ಅನೇಕ ಸಮಸ್ಯೆಗಳನ್ನು ಬರಮಾಡಿಕೊಂಡಿದ್ದೇವೆ ಎಂದು ಲಯನ್ಸ್ ಕ್ಲಬ್ ಚನ್ನಗಿರಿ ಚೆನ್ನಮ್ಮಾಜಿ ಅಧ್ಯಕ್ಷ ಪ್ರಕಾಶ್ ಮಾವಿನಹೊಳೆ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಿಕಾ ಪ್ರೌಢಶಾಲೆ ಆವರಣದಲ್ಲಿ ಲಯನ್ಸ್ ಕ್ಲಬ್ ಚನ್ನಗಿರಿ ಚೆನ್ನಮ್ಮಾಜಿ ಹಾಗೂ ಸರ್ಕಾರಿ ಬಾಲಿಕಾ ಪ್ರೌಢಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಸಿರು ಉಳಿಸಿ ಮರಗಿಡಗಳನ್ನು ಬೆಳೆಸಿ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಅಭಿವೃದ್ಧ್ದಿ ಹೆಸರಿನಲ್ಲಿ ರಸ್ತೆಬದಿ ಇರುವಂತ ಮರಗಳನ್ನು ಕಡಿಯುವುದು ತಪ್ಪಲ್ಲ. ಆದರೆ, ಅದರ ಜತೆಯಲ್ಲಿ ಖಾಲಿ ಇರುವಂತಹ ಕಡೆಗಳಲ್ಲಿ ಸಸಿ ನೆಟ್ಟು ಬೆಳೆಸಬೇಕು. ಮನೆಗೊಂದು ಸಸಿ, ಮಗುವಿಗೆ ಒಂದು ಸಸಿ ಎನ್ನುವಂತೆ ಪ್ರತಿಮನೆಗೆ ಸಸಿ ಬೆಳೆಸಬೇಕು. ಶಾಲಾಕಾಲೇಜು ಆವರಣ, ಕೆರೆ ಬದು, ಪಟ್ಟಣ ಗ್ರಾಮಗಳಲ್ಲಿ ಸ್ಥಳವಿರುವ ಕಡೆಯಲ್ಲಿ ಹೆಚ್ಚೆಚ್ಚು ಮರಗಳನ್ನು ಬೆಳೆಸಬೇಕು ಎಂದರು.
ಪ್ರೌಢಶಾಲೆ ಮುಖ್ಯಶಿಕ್ಷಕ ಬಸವರಾಜ್ ಮಾತನಾಡಿದರು.
ಲಯನ್ಸ್ ಕ್ಲಬ್ ಖಜಾಂಚಿ ಎಚ್. ಕೃಷ್ಣಮೂರ್ತಿ, ಎನ್.ವಿ. ಹರೀಶ್, ಜಿ.ಎಂ. ನರೇಂದ್ರ, ಜವಳಿ ಮಹೇಶ್, ಜ್ಯೋತಿಪ್ರಸಾದ್, ಎಂ.ಬಿ. ಶಿವಕುಮಾರ್, ರವಿಕುಮಾರ್, ದೀಪಕ್, ಮುಖೇಶ್, ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ್ ಮತ್ತಿತರರು ಇದ್ದರು.