ಚನ್ನರಾಯಪಟ್ಟಣ: ಮನೆ ಮನೆಗೂ ನಲ್ಲಿಗಳ ಮೂಲಕ ಕುಡಿಯುವ ನೀರು ಕಲ್ಪಿಸುವ ಯೋಜನೆಗೆ 500 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ತಾಲೂಕಿನ ಬಿರದಕೆರೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಓವರ್ಹೆಡ್ ಟ್ಯಾಂಕನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಈಗಾಗಲೇ ಅನುಮೋದನೆಯೊಂದಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು. ತಾಲೂಕು ಪಂಚಾಯಿತಿಯ ಅನಿರ್ಬಧಿತ ಹಾಗೂ 15ನೇ ಹಣಕಾಸಿನ ಯೋಜನೆಯಡಿ 17 ಲಕ್ಷ ರೂ. ವೆಚ್ಚದಲ್ಲಿ ಈ ಓವರ್ ಹೆಡ್ಟ್ಯಾಂಕ್ ನಿರ್ಮಿಸಿದ್ದು, ಗ್ರಾಮದ 130 ಮನೆಗಳಿಗೂ ಪೈಪ್ಲೈನ್ ವ್ಯವಸ್ಥೆಯೊಂದಿಗೆ ನಲ್ಲಿಗಳ ಮೂಲಕ ನೀರು ಒದಗಿಸಲಾಗಿದೆ ಎಂದು ತಿಳಿಸಿದರು.
ಡಿ.ತುಮಕೂರು ಗ್ರಾಮದಿಂದ ಬಿದರಕೆರೆ ವರಗಿನ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗಿದೆ. ದಿಡಗ ಗ್ರಾಮದಿಂದ ಪಕ್ಕದ ತುರುವೆಕೆರೆ ತಾಲೂಕಿಗೆ ಸಂಪರ್ಕ ಕಲ್ಪಿಸುವ ಗಡಿಭಾಗದ ರಸ್ತೆಯನ್ನು ಅಗತ್ಯ ಸ್ಥಳಗಳಲ್ಲಿ ಚರಂಡಿ ಹಾಗೂ ಸೇತುವೆ ನಿರ್ಮಿಸುವ ಮೂಲಕ ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಉಗೇನಹಳ್ಳಿ ರಘುರಾಮ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಆರ್.ವಾಸು, ಪುಟ್ಟರಾಜು, ದಿಡಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ, ಸದಸ್ಯ ರವಿಕುಮಾರ್, ಜಿಲ್ಲಾ ಪಂಚಾಯಿತಿ ಜೆಇ ಮಂಜುನಾಥ್, ಗುತ್ತಿಗೆದಾರ ಲಿಂಗರಾಜ್, ಪ್ರಮುಖರಾದ ಧರ್ಮಪಾಲ್, ವಸಂತ್ ಇತರರು ಇದ್ದರು.