ಬಾಗಲಕೋಟೆ: ಜಿಲ್ಲೆಯ ವರುಣನ ಆರ್ಭಟ ಮುಂದುವರೆದಿದ್ದು, ನಿರಂತರ ಮಳೆಯಿಂದಾಗಿ ಮನೆ ಕುಸಿದು ಬಿದ್ದ ಪರಿಣಾಮ ವೃದ್ಧೆ ಮೃತಪಟ್ಟಿರುವ ಘಟನೆ ಇಲ್ಲಿನ ಕಿಲ್ಲಾ ಓಣಿಯಲ್ಲಿ ಗುರುವಾರ ನಡೆದಿದೆ.
ಸುಧಾಬಾಯಿ ಕಾವೇರಿ(೮೦) ಮೃತಪಟ್ಟ ವೃದ್ಧೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದಿದೆ. ಮನೆಯಲ್ಲಿ ಮಲಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಾಗಲಕೋಟೆ ನಗರ ಪೊಲೀಸ್ ಠಾಣೆ ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ಶವ ಹೊರಗೆ ತೆಗೆದಿದ್ದಾರೆ. ಇನ್ನೂ ಮೃತಪಟ್ಟ ಕುಟುಂಬಸ್ಥರಿಗೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಕ್ಷಣಕ್ಕೆ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಂಡರು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಹಸೀಲ್ದಾರ ವಿನಯಕುಮಾರ ಪಾಟೀಲ ೫ ಲಕ್ಷ ರೂ. ಪರಿಹಾರದ ಚಕ್ ಮೃತ ವೃದ್ಧೆಯ ಕುಟುಂಬಸ್ಥರಿಗೆ ವಿತರಿಸಿದರು.