ಚಿತ್ರದುರ್ಗ: ಲೋಕಸಭಾ ಚುನಾವಣೆಯ ಮೂಲಕ ದೇಶದಲ್ಲಿ ಉತ್ಕೃಷ್ಟ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು, ಪ್ರಜಾಪ್ರಭುತ್ವ ಬಲಗೊಳಿಸಲು ಅರ್ಹರೆಲ್ಲರೂ ತಪ್ಪದೆ ಮತ ಚಲಾಯಿಸಿ ಎಂದು ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಸಲಹೆ ನೀಡಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ಎಂಬುದು ಸಂವಿಧಾನ ನೀಡಿರುವ ಉತ್ಸವ. ಈ ಹಬ್ಬದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ತುಂಬಾ ಅಗತ್ಯವಿದೆ ಎಂದರು.
ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆದರೂ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಹೀಗಾಗಿ ಸ್ಥಳೀಯರಿಗೆ ಆದ್ಯತೆ ಮೇರೆಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಗುರುಪೀಠ ಸ್ಥಾಪನೆಯಾಗಿ 22 ವರ್ಷ ಪೂರೈಸಿದ್ದು, 2027ಕ್ಕೆ ಬೆಳ್ಳಿ ಮಹೋತ್ಸವ ಆಚರಿಸಲು ಈಗಿನಿಂದಲೇ ಸಿದ್ಧತೆಯಲ್ಲಿ ತೊಡಗಿದ್ದೇವೆ. ಇದಕ್ಕೆ ಸಮುದಾಯದವರು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಹಿಳೆಯರಿಗೆ ಆದ್ಯತೆ ನೀಡಿ: ಪ್ರಧಾನಿ ನರೇಂದ್ರಮೋದಿ ಅವರು ಶೇ 33ರಷ್ಟು ಮಹಿಳೆಯರಿಗೆ ಮೀಸಲಾತಿ ಘೋಷಿಸಿದ್ದಾರೆ. ಆದರೂ ಟಿಕೆಟ್ ಹಂಚಿಕೆಯಲ್ಲಿ ಸ್ತ್ರೀಯರಿಗೆ ರಾಜ್ಯದಲ್ಲಿ ಆದ್ಯತೆ ನೀಡಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ರಾಷ್ಟ್ರೀಯ ಪಕ್ಷಗಳು ಪ್ರಾಮುಖ್ಯತೆ ನೀಡಬೇಕು. ಬಿಜೆಪಿಯಿಂದ ಭಾರ್ಗವಿ ದ್ರಾವಿಡ್ ಸೇರಿ ಸಮುದಾಯದ ಯಾರಿಗಾದರೂ ಚಿತ್ರದುರ್ಗ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.
ಮುಖಂಡರಾದ ಶೇಷಪ್ಪ, ಹನುಮಪ್ಪ, ಹೊಳಲ್ಕೆರೆ ಲಿಂಗಪ್ಪ, ಭರಮಸಾಗರ ಸತ್ಯಪ್ಪ, ಸುವರ್ಣಮ್ಮ, ನರಸಿಂಹಮೂರ್ತಿ, ನವೀನ್ ದ್ರಾವಿಡ್, ಛಲವಾದಿ ತಿಪ್ಪೇಸ್ವಾಮಿ ಇತರರಿದ್ದರು.