ಗೋಕರ್ಣ: ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಕಾಡುತ್ತ ಬಂದಿರುವ ಮತ್ಸ್ಯ ಕ್ಷಾಮದಿಂದ ಜಿಲ್ಲೆಯ ಮೀನುಗಾರರು ಆರ್ಥಿಕವಾಗಿ ತೀವ್ರ ಬಸವಳಿದಿದ್ದಾರೆ. ಮತ್ಸ್ಯ ಅಭಾವದಿಂದ ಉಂಟಾಗುವ ನಷ್ಟ ತುಂಬಿಕೊಡಬಲ್ಲ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಜಿಪಂ ಸದಸ್ಯ ಪ್ರದೀಪ ನಾಯಕ ಹೇಳಿದರು.
ಬೆಟ್ಕುಳಿಯ ಹರಿಕಂತ್ರ ಫ್ರೆಂಡ್ಸ್ ಕ್ಲಬ್ ಆಯೋಜಿಸಿದ್ದ ಸನ್ಮಾನ ಮತ್ತು ಮನರಂಜನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ತಾಪತ್ರಯದ ನಡುವೆಯೂ ಸಮಾಜ ಮುಖಿಯಾದ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವ ಮೀನುಗಾರ ಯುವಕರನ್ನು ಅವರು ಶ್ಲಾಘಿಸಿದರು.
ಕಾಂಗ್ರೆಸ್ ಜಿಲ್ಲಾ ಹಿಂದುಳಿದ ವಿಭಾಗ ಅಧ್ಯಕ್ಷ ರವಿಕುಮಾರ ಶೆಟ್ಟಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಭಾವನಾತ್ಮಕ ಮಾತುಗಳಿಂದ ಜನರನ್ನು ಮರಳುಮಾಡುತ್ತ ಬಂದಿವೆ. ಸಮಾಜ ಪರವಾದ ಯಾವುದೇ ಗುರುತರ ಅಭಿವೃದ್ಧಿ ಕಾರ್ಯಗಳು ಈ ಸರ್ಕಾರಗಳಿಂದ ಆಗುತ್ತಿಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತು ಕಷ್ಟದಲ್ಲಿರುವ ಮೀನುಗಾರರ ಸಹಾಯಕ್ಕೆ ಬರುವಂತಾಗಲಿ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಲಕ್ಷ್ಮಣ ಹರಿಕಂತ್ರ ವಹಿಸಿದ್ದರು. ಸಮಾರಂಭದಲ್ಲಿ ನಿವೃತ್ತ ಸೈನಿಕ ಜಯಂತ ಹೊನ್ನಪ್ಪ ಲಕ್ಕುಮನೆ, ಉರಗ ತಜ್ಞ ಅಶೋಕ ನಾಯ್ಕ ಬೇಲೆಕಾನು, ಒಲಿಂಪಿಕ್ಸ್ ಪಟು ಸಂದೀಪ ಕೃಷ್ಣ ಹರಿಕಂತ್ರ, ತುರ್ತು ಸಂದರ್ಭದ ರಕ್ತದಾನಿ ಭಟ್ಕಳದ ದಿನೇಶ ಉಡುಪ ಅವರನ್ನು ಸನ್ಮಾನಿಸಲಾಯಿತು. ಕರವೇ ಹೊನ್ನಾವರ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ, ಮೀನುಗಾರ ಸಮಾಜದ ಜಗದೀಶ ಹರಿಕಂತ್ರ, ಗೋಪಾಲ ಹೊಸ್ಕಟ್ಟ, ಶಿವರಾಮ ಹರಿಕಂತ್ರ ಉಪಸ್ಥಿತರಿದ್ದರು.