ಚಿತ್ರದುರ್ಗ: ಲೋಕಸಭಾ ಚುನಾವಣೆ ಪ್ರಚಾರಕ್ಕೆ ಬುಧವಾರ ಸಂಜೆ ತೆರೆ ಬಿದ್ದಿದ್ದು, ಮತದಾರರ ಮನವೊಲೈಕೆಗೆ ಕೊನೇ ಕಸರತ್ತು ಎಂಬಂತೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮನೆ, ಮನೆಗೆ ಭೇಟಿ ನೀಡಿ ಮತ ಯಾಚಿಸುತ್ತಿದ್ದಾರೆ.
ಇನ್ನೊಂದೆಡೆ ಮುಕ್ತ, ಶಾಂತಿಯುತ ಮತ್ತು ನ್ಯಾಯ ಸಮ್ಮತ ಮತದಾನಕ್ಕಾಗಿ ಅಧಿಕಾರಿಗಳು ಅಂತಿಮ ಸಿದ್ಧತೆಯಲ್ಲಿ ತೊಡಗಿಕೊಂಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ನಡೆಯಲಿರುವ ಮತದಾನದ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿದೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ, ಒಂದು ವಿಧಾನಸಭಾ ಕ್ಷೇತ್ರಕ್ಕೆ ತಲಾ ಐದರಂತೆ ಸಖಿ ಹಾಗೂ ತಲಾ ಒಂದರಂತೆ ಯುವ, ಅಂಗವಿಕಲ, ಎಥ್ನಿಕ್ ಹಾಗೂ ಥೀಮ್ಬೇಸ್ಡ್ ಮತಗಟ್ಟೆಗಳನ್ನು ಸ್ಥಾಪಿಸಿದೆ.
*ಮಸ್ಟರಿಂಗ್: ಲೋಕಸಭೆ ಚುನಾವಣೆಗೆ ಏ.26ರಂದು ನಡೆಯಲಿರುವ ಮತದಾನಕ್ಕಾಗಿ 25ರಂದು ಮಸ್ಟರಿಂಗ್ ನಡೆಯಲಿದೆ. ಮೊಳಕಾಲ್ಮೂರು ಸರ್ಕಾರಿ ಪಪೂ ಕಾಲೇಜು, ಚಳ್ಳಕೆರೆ ಎಚ್ಪಿಪಿಸಿ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು ಹೊಸ ಕಟ್ಟಡ, ಹಿರಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊಸದುರ್ಗ ತಾಯಮ್ಮ ಎಡತೊರೆ ಸದ್ದಿವಾಲ್ ಲಿಂಗಯ್ಯ ಪಪೂ ಕಾಲೇಜು, ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿರಾದ ಕಲಾ, ವಿಜ್ಞಾನ, ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಹಾಗೂ ಪಾವಗಡ ಸರ್ಕಾರಿ ಪಪೂ ಕಾಲೇಜಿ ನಲ್ಲಿ ಮಸ್ಟರಿಂಗ್ ನಡೆಯಲಿದೆ.