ಇಟಗಿ: ಕನ್ನಡ ನಾಡಿಗೆ ಅನ್ನ ದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಜ್ಞಾನ ಒದಗಿಸುವಲ್ಲಿ ಮಠ-ಮಾನ್ಯಗಳ ಕೊಡುಗೆ ಅಪಾರವಾಗಿದೆ ಎಂದು ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸಮೀಪದ ಬಿಳಕಿ-ಅವರೊಳ್ಳಿ ರುದ್ರಸ್ವಾಮಿ ಮಠದಲ್ಲಿ ಲಿಂಗೈಕ್ಯ ಶ್ಯಾಂಡಿಲ್ಯ ಸ್ವಾಮೀಜಿ 6ನೆಯ ಪುಣ್ಯಾರಾಧಣೆಯ ನಿಮಿತ್ತ ಹಮ್ಮಿಕೊಂಡಿದ್ದ ಸನಾತನ ಸಂಸ್ಕೃತಿ ಸಮಾವೇಶವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಮಠ-ಮಾನ್ಯಗಳಿರುವುದರಿಂದ ಶ್ರೀಸಾಮಾನ್ಯರು ಉನ್ನತ ಶಿಕ್ಷಣ ಪಡೆದು, ಪ್ರಪಂಚದ ಮೂಲೆ ಮೂಲೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಬೆಳೆಸುವಲ್ಲಿ ತಾಯಂದಿರ ಪಾತ್ರ ಮುಖ್ಯವಾಗಿದ್ದು, ಭಾರತೀಯ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಇಂದಿನ ಪುಣ್ಯಾರಾಧನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು ಭಾಗವಹಿಸಿದ್ದು, ಅಭಿಮಾನದ ಸಂಗತಿ. ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ಸಮಯದಲ್ಲಿ ಎಲ್ಲ ಸಮುದಾಯದ ಮಠ-ಮಾನ್ಯಗಳಿಗೆ ವಿಶೇಷ ಅನುದಾನ ನೀಡುವ ಮೂಲಕ ಮಠಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ. ಶ್ರೀಮಠದ ಈಗಿನ ಪೂಜ್ಯರಾದ ಚನ್ನಬಸವ ದೇವರು ಚಿಕ್ಕ ವಯಸ್ಸಿನಲ್ಲಿಯೇ ಸಮಾಜಮುಖಿ ಕಾರ್ಯಗಳ ಮೂಲಕ, ಯುವ ಜನಾಂಗವನ್ನು ಧರ್ಮ ಮತ್ತು ಅಧ್ಯಾತ್ಮದ ಮೂಲಕ ಮುನ್ನಡೆಸಿದ್ದಾರೆ. ಶ್ರಿಮಠದಲ್ಲಿ ಗೋ ಶಾಲೆಯನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಖಾನಾಪುರ ತಾಲೂಕಿನ ಜನತೆಯ ಉತ್ತವ ಆರೋಗ್ಯಕ್ಕಾಗಿ ಸೂಕ್ತ ಚಿಕಿತ್ಸೆ ನೀಡಲು ಕೆ.ಎಲ್.ಇ ಸಂಸ್ಥೆ ಕ್ರಮ ಕೈಗೊಳ್ಳಲಿದೆ ಎಂದರು.
ಬಿಜೆಪಿ ಮುಖಂಡ ವಿಠ್ಠಲ ಹಲಗೇಕರ ಮಾತನಾಡಿ, ಶ್ರೀ ಮಠದಿಂದ ನಡೆಸುತ್ತಿರುವ ಗೋಶಾಲೆ ನಿರ್ಮಾಣಕ್ಕೆ 2 ಎಕರೆ ಭೂಮಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದರು.
ಬೆಂಗಳೂರು ಬಿಎಂಆರ್ಡಿಎ ಆಯುಕ್ತ ಗಿರೀಶ ಹೊಸೂರ ಮಾತನಾಡಿ, ಖಾನಾಪುರ ತಾಲೂಕು ವಿಶಿಷ್ಟ ಪ್ರಾಕತಿಕ ಪರಿಸರ, ಜಲ ಮೂಲಗಳ ಲಭ್ಯತೆ ಇದ್ದರೂ ನಿರೀಕ್ಷಿತ ಅಭಿವದ್ಧಿ ಸಾಧ್ಯವಾಗಿಲ್ಲ. ಬರುವ ದಿನಗಳಲ್ಲಿ ಇದಕ್ಕೆ ರಾಜಕೀಯ ಇಚ್ಚಾಶಕ್ತಿ ಅವಶ್ಯಕತೆ ಇದೆ ಎಂದರು.
ಬಿಳಕಿ-ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವ ದೇವರು, ಮುಕ್ತಿಮಠದ ಶಿವಸಿದ್ಧ ಸೋಮೆಶ್ವರ ಶಿವಾಚಾರ್ಯ ಸ್ವಾಮೀಜಿ, ತೆಲಂಗಾಣದ ಪಂಚಮ ಸಿದ್ದಲಿಂಗ ಶ್ರೀ, ಶಂಭುಲಿಂಗ ಶಿವಾಚಾರ್ಯ ಶ್ರೀ, ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅರವಿಂದ ಪಾಟೀಲ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಡಾ.ರವಿ ಪಾಟೀಲ, ಪ್ರಮೋದ ಕೊಚೇರಿ, ಸುಭಾಷ ಗುಳಶೆಟ್ಟಿ, ಶ್ರೀಕಾಂತ ಇಟಗಿ, ಸಂಜಯ ಕುಬಲ, ದಶರಥ ಭನೋಶಿ, ವಿವೇಕ ಕುರಗುಂದ ಇತರರು ಇದ್ದರು.