ಚನ್ನರಾಯಪಟ್ಟಣ: ಪಟ್ಟಣದ ರಾಮೇಶ್ವರ ಬಡಾವಣೆಯ ಮನೆಯೊಂದರಲ್ಲಿ ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಇಬ್ಬರನ್ನು ನಗರ ಠಾಣೆ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದು, ಒಂದು ಸ್ಕ್ಯಾನಿಂಗ್ ಯಂತ್ರ ಹಾಗೂ ಇತರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಜಯನಗರ ಬಡಾವಣೆಯ ಡಾ.ಜೆ.ಎಂ.ಮಲ್ಲಿಕಾರ್ಜುನ್ ಹಾಗೂ ಚನ್ನರಾಯಪಟ್ಟಣದ ಡಿ.ಕೇಳೇನಹಳ್ಳಿ ರಸ್ತೆಯ ನಿವಾಸಿ ಪ್ರಯೋಗ ಶಾಲೆಯ ತಜ್ಞೆ ಎ.ಎಲ್.ಸತ್ಯ ಬಂಧಿತರು.
ರಾಮೇಶ್ವರ ಬಡಾವಣೆಯ ಮನೆಯಲ್ಲಿ ಕಾನೂನು ಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡಿ ಮಾಹಿತಿಯನ್ನು ಬಹಿರಂಗಪಡಿಸುತ್ತಿರುವ ಬಗ್ಗೆ ದೂರು ಬಂದಿದ್ದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಡಿಎಚ್ಒ ಡಾ.ಶಿವಸ್ವಾಮಿ ಅವರಿಗೆ ಸೂಚನೆ ನೀಡಿದ್ದರು. ಡಿಎಚ್ಒ ನಗರ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಫೆ.11ರಂದು ಸಂಜೆ ಪೊಲೀಸರು ಮನೆ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಮೂವರು ಗರ್ಭಿಣಿಯರು ಇದ್ದರು. ಸ್ಕ್ಯಾನಿಂಗ್ ಯಂತ್ರದಿಂದ ಪರೀಕ್ಷೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಡಾ.ಜೆ.ಎಂ.ಮಲ್ಲಿಕಾರ್ಜುನ್ ಹಾಗೂ ಎ.ಎಲ್.ಸತ್ಯ ಅವರನ್ನು ಬಂಧಿಸಿ, ಸ್ಕ್ಯಾನಿಂಗ್ ಯಂತ್ರವನ್ನು ವಶಪಡಿಸಿಕೊಳ್ಳಲಾಯಿತು. ಅಲ್ಲದೆ, ಮೂವರು ಮಹಿಳೆಯರನ್ನು ವಿಚಾರಣೆ ನಡೆಸಿದಾಗ, ಭ್ರೂಣಲಿಂಗ ಪತ್ತೆಗೆ ಬಂದಿರುವುದು ಗೊತ್ತಾಗಿದೆ. ತಲಾ ಒಬ್ಬರಿಂದ 3 ರಿಂದ 5 ಸಾವಿರ ರೂ. ವಸೂಲಿ ಮಾಡಿರುವುದು ತಿಳಿದುಬಂದಿದೆ.
ಮೂವರು ಮಹಿಳೆಯರನ್ನು ಅಗತ್ಯವಿದ್ದಲ್ಲಿ ವಿಚಾರಣೆಗೆ ಪೊಲೀಸರ ಮುಂದೆ ಹಾಜರಾಗುವಂತೆ ತಿಳಿಸಿ ಮನೆಗೆ ಕಳುಹಿಸಲಾಗಿದೆ. ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.