ಧಾರವಾಡ: ಲಾಕ್ಡೌನ್ ಜಾರಿಯಾದಾಗಿನಿಂದ ಪೂರ್ವ ಆಫ್ರಿಕಾದ ಉಗಾಂಡಾ ದೇಶದ ಪ್ರಜೆಯೊಬ್ಬ ನಗರದಲ್ಲಿ ವಾಸವಾಗಿದ್ದಾನೆ. ಭಾರತೀಯ ತತ್ತ್ವಶಾಸ್ತ್ರ ಅಧ್ಯಯನಕ್ಕಾಗಿ ಇಲ್ಲಿಗೆ ಬಂದಿರುವ ಈತ, 3 ತಿಂಗಳಿಂದ ಹಾಸ್ಟೆಲ್ವೊಂದರಲ್ಲಿ ಏಕಾಂಗಿಯಾಗಿದ್ದಾನೆ. ಈ ಸಂದರ್ಭದಲ್ಲಿ ಆತನಿಗೆ ಆತ್ಮಸ್ಥೈರ್ಯ ತುಂಬಿದ್ದು ತತ್ತ್ವಶಾಸ್ತ್ರ ಓದು!
ಉಗಾಂಡಾದ ಜಿಯಾಲ್ ಎಂಬಾತ ಕರ್ನಾಟಕ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಇಲ್ಲೇ ಸ್ನಾತಕೋತ್ತರ ಪದವಿ ಪೂರೈಸಿದ್ದು, ತತ್ತ್ವಶಾಸ್ತ್ರದಲ್ಲಿ ಪಿ.ಎಚ್ಡಿ ಮಾಡುತ್ತಿದ್ದಾನೆ. ಮಾರ್ಚ್ನಲ್ಲಿ ಲಾಕ್ಡೌನ್ ಜಾರಿಯಾಗುತ್ತಿದ್ದಂತೆ ಈತನ ಸಹಪಾಠಿಗಳೆಲ್ಲ ಊರುಗಳಿಗೆ ಹೋಗಿದ್ದಾರೆ. ಈತ ಕರ್ನಾಟಕ ವಿಶ್ವವಿದ್ಯಾಲಯದ ಭೀಮಾ ಹಾಸ್ಟೆಲ್ನಲ್ಲಿ ಏಕಾಂಗಿಯಾಗಿ ಉಳಿಯಬೇಕಾಯಿತು. ಸ್ವಯಂಪ್ರೇರಿತ ಕ್ವಾರಂಟೈನ್ ವಿಧಿಸಿಕೊಂಡ ಜಿಯಾಲ್, ಅಗತ್ಯ ದಿನಸಿ ಖರೀದಿಸಿ ಹಾಸ್ಟೆಲ್ನಲ್ಲೇ ಅಡುಗೆ ಮಾಡಿಕೊಂಡು ಉಳಿದಿದ್ದಾನೆ.
ಸುದೀರ್ಘ 3 ತಿಂಗಳ ಕಾಲ ಏಕಾಂಗಿಯಾಗಿರುವ ಈತ ಒಂಟಿತನ ಕಳೆಯಲು ಭಾರತೀಯ ತತ್ತ್ವಶಾಸ್ತ್ರ ಓದಿಗೆ ಮೊರೆ ಹೋಗಿದ್ದಾನೆ. ಪುಸ್ತಕಗಳನ್ನು ಓದುತ್ತ ದಿನ ಕಳೆದ ಜಿಯಾಲ್ಗೆ ಬಸವೇಶ್ವರ ಮತ್ತು ರಾಮಾನುಜಾಚಾರ್ಯರು ಎಂದರೆ ಅಚ್ಚುಮೆಚ್ಚು.
ಒಟ್ಟಾರೆ ಕರೊನಾದಿಂದ ಅದೆಷ್ಟೋ ಜನ ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ. ಅಂಥವರಿಗೆ ಭಾರತೀಯ ತತ್ತ್ವಶಾಸ್ತ್ರ ಓದಿನಲ್ಲಿ ನಿರತನಾಗಿರುವ ಉಗಾಂಡಾದ ಜಿಯಾಲ್ ಮಾದರಿಯಾಗಿದ್ದಾನೆ.