ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕಿಡಿ
ಬೇಲೂರು: ಇಲ್ಲಿನ ಶ್ರೀ ಚನ್ಮಕೇಶವಸ್ವಾಮಿ ದೇಗುಲಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ದೇಗುಲ ಆಡಳಿತ ಮಂಡಳಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದ ಆಸೆ ಬಿಟ್ಟು ದೇಶದ ಭದ್ರತೆ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಪಿಎಫ್ಐ ಸಂಘಟನೆ ಬ್ಯಾನ್ ಮಾಡಿದ್ದಕ್ಕೆ ಸಿದ್ದರಾಮಯ್ಯರ ಮನಸ್ಸಿಗೆ ನೋವಾಗಿರಬಹುದು. ಅವರಿಗೆ ಅಧಿಕಾರ ಬಿಟ್ಟರೆ ದೇಶದ ಭದ್ರತೆಯ ಬಗ್ಗೆ ಯಾವತ್ತೂ ಚಿಂತನೆ ಮಾಡಿಲ್ಲ ಎಂದರು.
ದೇಶ ಕಟ್ಟುವಲ್ಲಿ ಮತ್ತು ಕಾಯುವಲ್ಲಿ ಆರ್ಎಸ್ಎಸ್ ಪ್ರಮುಖ ಪಾತ್ರ ವಹಿಸಿದೆ. ಆದರೆ ಸಿದ್ದರಾಮಯ್ಯಗೆ ಸಂಘ ಪರಿವಾರ, ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ಟಾರ್ಗೆಟ್ ಮಾಡುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು .
ಪ್ರಧಾನಿ ಮೋದಿ ಸುಮ್ಮನೆ ಪಿಎಫ್ಐ ಅನ್ನು ಬ್ಯಾನ್ ಮಾಡಿಲ್ಲ. ಎನ್ಐಎ ಇಂಟಿಲಿಜೆನ್ಸಿ ವರದಿ ಆಧರಿಸಿ ನೀಡಿದ ತನಿಖಾ ವರದಿ ನಂತರ ಅನೇಕ ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸಿ ಗೃಹ ಸಚಿವರಿಗೆ ಮನದಟ್ಟು ಮಾಡಿದ ನಂತರವೇ ಬ್ಯಾನ್ ಮಾಡಲಾಗಿದೆ ಎಂದರು .
ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಮುಖಂಡ ಶೇಖರಯ್ಯ, ಮಲ್ಲಿಕಾರ್ಜುನ, ಅರ್ಚಕ ಶ್ರೀನಿವಾಸ ಭಟ್ಟರ್ ಇದ್ದರು.