ಬಾಗಲಕೋಟೆ: ಕಾರ್ತಿಕೋತ್ಸವದ ಅಂಗವಾಗಿ ತಾಲೂಕಿನ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ಜಾತ್ರೆ ಸಡಗರ-ಸಂಭ್ರಮದಿಂದ ಜರುಗಿತು. ಸಹಸ್ರಾರು ಸಂಖ್ಯೆಯ ಭಕ್ತರ ಹರ್ಷೋದ್ಘಾರ ನಡುವೆ ಮಂಗಳವಾರ ಸಂಜೆ ಮಹಾರಥೋತ್ಸವ ಜರುಗಿತು.
ಬೆಳಗ್ಗೆ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ, ಜಲಾಭಿಷೇಶಕ, ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲೆಯ ಹಾಗೂ ಹೊರಜಿಲ್ಲೆಯಿಂದ ಭಕ್ತರು ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಸರದಿಯಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದುಕೊಂಡರು.
ಸಂಜೆ ದೇವಸ್ಥಾನದ ಆವರಣದಿಂದ ಹೊರಟ ಮಹಾ ರಥೋತ್ಸವ ಕಿಕ್ಕಿರಿದು ತುಂಬಿದ್ದ ಭಕ್ತರ ಸಮೂಹದ ಮಧ್ಯೆ ಸಕಲ ವಾದ್ಯ ವೈಭವ, ಮುತೈದೆಯರ ಆರುತಿ, ಪುರಂವತರೊಂದಿಗೆ ಸಾಗಿತು. ಈ ವೇಳೆ ದೊಡ್ಡ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ರಥಕ್ಕೆ ಭಕ್ತರು ಉತ್ತತ್ತಿ ಹಾರಿಸಿ ಭಕ್ತಿ ಸಮರ್ಪಿಸಿದರು. ದೇವಸ್ಥಾನದಿಂದ ಹೊರಟ ಮಹಾರಥ ಗ್ರಾಮದ ಅಗಸಿ ಬಾಗಿಲಿಗೆ ತಲುಪಿ ನಂತರ ದೇವಸ್ಥಾನಕ್ಕೆ ಮರಳಿತು.
ವೀರಾಪುರದ ಗ್ರಾಮದಿಂದ ಎತ್ತಿನ ಗಾಡಿಯಲ್ಲಿ ದೊಡ್ಡ ರಥದ ಹಗ್ಗ ತರಲಾಯಿತು. ಸೀಮಿಕೇರಿಯಿಂದ ನಂದಿಕೋಲು ಆಗಮಿಸಿದಾಗ ಬೆಣ್ಣೂರಿನಿಂದ ದೊಡ್ಡ ರಥದ ಕಳಸಗಳು ಒಂದೇ ಸಮಯಕ್ಕೆ ಗ್ರಾಮ ಪ್ರವೇಶಿಸುತ್ತಿದ್ದಂತೆ ಜಾತ್ರೆಗೆ ಮೆರಗು ಬಂದಿತು. ಗ್ರಾಮದ ಒಂದು ಬದಿಯಿಂದ ಬರುವ ಹಗ್ಗದ ಮೆರವಣಿಗೆ ಹಾಗೂ ಕಳಸದ ಮತ್ತು ನಂದಿಕೋಲಿನ ಮೆರವಣಿಗೆ ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಸೇರಿತ್ತು.
ರಥೋತ್ಸವಕ್ಕೂ ಮುನ್ನ ಪುರುವಂತರು, ಭಕ್ತರು ಶಸ್ತ್ರ ಹಾಕಿಕೊಳ್ಳುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಪುರವಂತರು ಶಸ್ತ್ರಗಳನ್ನು ಹಾಕಿಕೊಳ್ಳುವ ದೃಶ್ಯ ರೋಮಾಚಂನಗೊಳಿಸಿತು.