ಚಿಂಚೋಳಿ: ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುರಿದ ಧಾರಕಾರ ಮಳೆಯಿಂದ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದ್ದು, ದವಸ -ಧಾನ್ಯ, ದಿನಬಳಕೆ ವಸ್ತುಗಳು ನೀರು ಪಾಲಾಗಿದೆ. ಕೆಲವು ಮನೆಗಳು ಕುಸಿದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಕೆರಳ್ಳಿ, ಬೆನಕನಳ್ಳಿ, ಭಂಟನಳ್ಳಿ, ಭೂತಪುರ ಗ್ರಾಮಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಇಡೀ ರಾತ್ರಿ ಜನತೆ ಜಾಗರಣೆ ಮಾಡುವಂತಾಗಿದೆ. ಕೆರಳ್ಳಿಯಲ್ಲಿ ಸುಮಾರು 15ಕ್ಕೂ ಅಧಿಕ ಮನೆಗಳಲ್ಲಿ ನೀರು ನುಗ್ಗಿದ್ದರೆ, ಬೆನಕನಳ್ಳಿ ಬಹುತೇಕ ಜಲಾವೃತವಾಗಿದೆ. ಇನ್ನು ಕುಡಿವ ನೀರು ಘಟಕಕ್ಕೂ ನೀರು ತುಂಬಿದ್ದು, ಜನತೆ ಶುದ್ಧ ನೀರಿಗಾಗಿ ಪರಿತಪ್ಪಿಸುವಂತಾಗಿದೆ. ಭಂಟನಳ್ಳಿಯಲ್ಲಿ ಕೆಲವು ಮನೆ, ಮಂದಿರಗಳಲ್ಲಿ ನೀರು ನುಗ್ಗಿವೆ.
ಇತ್ತೀಚೆಗೆ ಸುರಿದ ಮಳೆಯಿಂದ ಉದ್ದು, ಹೆಸರು ಸಂಪೂರ್ಣ ಹಾನಿಯಾಗಿತ್ತು. ಇದೀಗ ಧಾರಾಕಾರ ಮಳೆಯಿಂದ ತೊಗರಿ ಹಾಳಾಗಿದೆ. ಕೈಗೆ ಬಂದ ಫಸಲು ಬಾಯಿಗೆ ಬರದಂತಾಗಿದೆ. ಸುಲೇಪೇಟ ಕಂದಾಯ ಸಿಬ್ಬಂದಿ ಸುಭಾಷ ಸುಲೇಪೇಟ್ ಹಲವೆಡೆ ಭೇಟಿ ನೀಡಿ ಪರಿಶೀಲಿಸಿದ್ದು, ಸೂಕ್ತ ಪರಿಹಾರಕ್ಕೆ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಜನತೆಗೆ ಭರವಸೆ ನೀಡಿದ್ದಾರೆ.
ಚಿಂಚೋಳಿ- 54 ಮಿಮೀ., ಕುಂಚಾವರಂ- 60.4 ಮಿಮೀ., ನಿಡಗುಂದಾ- 90 ಮಿಮೀ., ಚಿಮ್ಮನಚೋಡ- 54.2 ಮಿಮೀ., ಐನಾಪುರ್- 20.5 ಮಿಮೀ., ಕೋಡ್ಲಿ- 111.2 ಮಿಮೀ., ಸುಲೇಪೇಟ್- 61.2 ಮಿಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ ಎಂದು ತಹಸೀಲ್ದಾರ್ ಅರುಣಕುಮಾರ ಕುಲಕಣರ್ಿ ತಿಳಿಸಿದ್ದಾರೆ.
ವಿವಿಧ ಗ್ರಾಮಗಳ ಸಂಪರ್ಕ ಕಡಿತ
ಚಿಂಚೋಳಿ- ಬೀದರ್ ಸಂಚಾರಿಸಲು ದೇಗಲಮಡಿ ಬಳಿ ತಾತ್ಕಲಿಕ ಸೇತುವೆ ಕೊಚ್ಚಿ ಹೋಗಿದ್ದು, ಇದರಿಂದ ಸಂಚಾರ ಸ್ಥಗಿತಗೊಂಡಿದೆ. ಕೋಡ್ಲಿ ಬಳಿಯ ಅಲ್ಲಾಪುರ ಕೆರೆ ಭತರ್ಿಯಾಗಿದ್ದು, ಹೆಚ್ಚುವರಿ ನೀರು ಹಳ್ಳಕ್ಕೆ ಹರಿದು ಬರುತ್ತಿದೆ. ಕೋಡ್ಲಿ- ರುಮ್ಮನಗೂಡ ರಸ್ತೆ ಸಂಪರ್ಕ ಕಡಿತವಾಗಿದೆ.