ಕೊಪ್ಪಳ: ಲೋಕಸಭೆ ಚುನಾವಣೆ ಅಂಗವಾಗಿ ಜಿಲ್ಲಾಡಳಿತದಿಂದ ಶನಿವಾರ ಕೊಪ್ಪಳ ಸೇರಿ ವಿವಿಧೆಡೆ ಬೈಲ್ ರ್ಯಾಲಿ ಆಯೋಜಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ರ್ಯಾಲಿಗೆ ಚಾಲನೆ ನೀಡಿದರು. ದ್ವಿಚಕ್ರ ವಾಹನಗಳೊಂದಿಗೆ ಅಧಿಕಾರಿ, ಸಿಬ್ಬಂದಿ ಬೃಹತ್ ವೃತ್ತ ನಿರ್ಮಿಸಿ “ಸ್ವೀಪ್ ಕೊಪ್ಪಳ, ಲೆಟ್ಸ್ ವೋಟ್ ವಿತ್ ಪ್ರೈಡ್, ಸೆಲೆಬ್ರೇಟ್ ದಿ ಬಿಗ್ಗೆಸ್ಟ್ ಫೆಸ್ಟಿವಲ್ ಆಫ್ ಡೆಮೊಕ್ರಸಿ’ ಘೋಷ ವಾಕ್ಯ ರಚಿಸಿದ್ದು ವಿಶೇಷವಾಗಿತ್ತು. ಜತೆಗೆ ಮೇ 7ರಂದು ಎಲ್ಲ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಪ್ರತಿಜ್ಞಾ ವಿಧಿ ಸ್ವಿಕರಿಸಲಾಯಿತು.
ರ್ಯಾಲಿ ಅಶೋಕ ವೃತ್ತ, ಬಸ್ ನಿಲ್ದಾಣ, ಲಾಲ ಬಹಾದ್ದೂರ ಶಾಸ್ತ್ರಿ ವೃತ್ತ ಮಾರ್ಗವಾಗಿ ಭಾಗ್ಯನಗರಕ್ಕೆ ತೆರಳಿತು. ಅಲ್ಲಿಂದ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿ ಓಜನಳ್ಳಿ ಗ್ರಾಮ ತಲುಪಿತು. ಮರಳಿ ಕಿನ್ನಾಳ ರಸ್ತೆ ಮೂಲಕ ಕೊಪ್ಪಳ ಸೇರಿತು. ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು ಭಾಗವಹಿಸಿ ಜಾಗೃತಿ ಲಕಗಳ ಮೂಲಕ ಮತದಾರರಿಗೆ ಅರಿವು ಮೂಡಿಸಿದರು. ನಗರ, ಸ್ಥಳಿಯ ಸಂಸ್ಥೆ ಕಸದ ವಾಹನಗಳಲ್ಲಿ ಮತದಾನ ಜಾಗೃತಿ ಗೀತೆ ಪ್ರಸಾರ ಮಾಡಲಾಯಿತು.
ಜಿಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ, ಡಿಡಿಪಿಐ ಶ್ರೀಶೈಲ ಬಿರಾದಾರ, ಜಿಪಂ ಸಹಾಯಕ ಕಾರ್ಯದರ್ಶಿ ಶಿವಪ್ಪ ಸುಬೇದಾರ, ಕೊಪ್ಪಳ ತಹಸೀಲ್ದಾರ್ ವಿಠ್ಠಲ್ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮನವರ, ತಾಲೂಕು ಶಿಕ್ಷಕರ ಸಂದ ಅಧ್ಯಕ್ಷ ಶರಣೇಗೌಡ, ಜಿಲ್ಲಾ ಸ್ವೀಪ್ ಸಂಯೋಜಕ ಶ್ರೀನಿವಾಸ ಚಿತ್ರಗಾರ ಇತರರಿದ್ದರು.