ಹಳಿಯಾಳ: ತಾಲೂಕಿನ ಬಿ.ಕೆ. ಹಳ್ಳಿ ಗ್ರಾಮದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಲಕ್ಷ್ಮೀದೇವಿ ಮಹಾರಥೋತ್ಸವ ಭಕ್ತರ ಜಯಘೊಷಗಳೊಂದಿಗೆ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.
ಇದಕ್ಕೂ ಮುನ್ನ ಬೆಳಗ್ಗೆ 11 ಗಂಟೆಗೆ ಜರುಗಿದ ಧಾರ್ವಿುಕ ಪೂಜಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಹಂಡಿಬಡಂಗನಾಥ ಮಠದ ಮಠಾಧೀಶ ಶ್ರೀ ಪೀಠಯೋಗ ಮೋಹನನಾಥಜೀ ಅವರು ರಥೋತ್ಸವಕ್ಕೆ ಶಾಸ್ತ್ರೋಕ್ತವಾಗಿ ಚಾಲನೆ ನೀಡಿದರು. ಮರಾಠವ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜ, ಶ್ರೀಕ್ಷೇತ್ರ ಕಾಶಿ ವೇದಾಂತಾಚಾರ್ಯ ಶ್ರೀ ಸೋಹಂ ಚೈತನ್ಯಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತೇರನ್ನು ವಿವಿಧ ಬಣ್ಣಗಳ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.