ಮಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಡಿದ ಆಟ ಮುಂದುವರಿಸಬೇಡಿ. ಸರಿಯಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ನಮ್ಮ ಔಷಧಾಲಯದಲ್ಲಿ ಬೇರೆಯೇ ಔಷಧ ಇದೆ ಎಂದು ರಾಜ್ಯ ಗೃಹ ಸಚಿವ ಡಾ.ಪರಮೇಶ್ವರ್ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವನ್ನು ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
ಗೃಹ ಇಲಾಖೆ ನನಗೇನೂ ಹೊಸತಲ್ಲ. ಮತ್ತೆ ಮೂರನೇ ಬಾರಿಗೆ ನನಗೆ ಸಿಕ್ಕಿದೆ. ಇಲಾಖೆಯಲ್ಲಿ ಮೊದಲು ಹೇಗೆ ಕೆಲಸ ಮಾಡಿದ್ದೀರೋ ಗೊತ್ತಿಲ್ಲ. ಏನೇನ್ ಆಟ ಆಡಿದ್ರೋ ಗೊತ್ತಿಲ್ಲ, ಕೇಸರಿಕರಣ ಮಾಡಿದ್ರೋ ಅಥವಾ ಇನ್ನೇನಾದ್ರು ಮಾಡಿದ್ರೋ.. ಈಗ ನಾನು ಅದನ್ನು ಕೇಳುವುದಿಲ್ಲ. ಆದರೆ ಇನ್ನು ಮುಂದೆ ಪೊಲೀಸರು ಸರಿಯಾಗಿ ಕೆಲಸ ಮಾಡಬೇಕು.
ಜಿಲ್ಲೆಯಲ್ಲಿ ಕೋಮು ಸಂಘರ್ಷ ನಡೆಯುತ್ತಿದೆ ಎನ್ನುವ ಕಪ್ಪು ಚುಕ್ಕೆ ಇದೆ. ನಾನು ಜಿಲ್ಲೆಯನ್ನು ಸರಿ ಮಾಡುತ್ತೇನೆ. ಸದ್ಯ ಪೊಲೀಸರ ಸಭೆ ನಡೆಸಿ ಕಠಿಣ ಕ್ರಮಗಳ ಬಗ್ಗೆ ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ಅನೈತಿಕ ಪೊಲೀಸ್ಗಿರಿ ಸಹಿಸುವುದಿಲ್ಲ ಎಂದಿದ್ದೇನೆ. ಅದನ್ನು ಮಟ್ಟ ಹಾಕಲು ಬೇಕಾದ ವ್ಯವಸ್ಥೆ ಜೋಡಿಸಲು ಸೂಚನೆ ನೀಡಿದ್ದೇನೆ ಎಂದವರು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಜೆ.ಆರ್.ಲೋಬೊ, ಮುಖಂಡರಾದ ಮಿಥುನ್ ರೈ, ಇಬ್ರಾಹಿಂ ಕೋಡಿಜಾಲ್ ಮೊದಲಾದವರಿದ್ದರು.