ಚಿತ್ರದುರ್ಗ: ಬಿಜೆಪಿಯಿಂದ ಗೊಲ್ಲ ಸಮುದಾಯಕ್ಕೆ ಅನ್ಯಾಯವಾಗಿದೆ. ಹೇಳಿದಂತೆ ನಡೆದುಕೊಳ್ಳಲಿಲ್ಲ ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬೇಸರಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಿಂದ ವೈಯಕ್ತಿಕವಾಗಿ ಯಾವುದೇ ಅನ್ಯಾಯವಾಗಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇಬ್ಬರೂ ಹಿರಿಯೂರು ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂ. ಅನುದಾನ ನೀಡಿದ್ದು, ಸಾಕಷ್ಟು ಜನಪರ ಕೆಲಸಗಳಾಗಿವೆ ಎಂದರು.
ನಮ್ಮ ಸಮುದಾಯದ ಹಿತ ಬಯಸುವವರು ಕಾಂಗ್ರೆಸ್ಗೆ ಈ ಹಿಂದೆಯೇ ಆಹ್ವಾನಿಸಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಇದಕ್ಕೆ ಹೊರತಲ್ಲ. ಮುಖಂಡರೊಂದಿಗೆ ಚರ್ಚಿಸಿದ್ದು, ಅ. 20ರಂದು ಸೇರ್ಪಡೆ ಖಚಿತ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ನಮ್ಮ ಸಮುದಾಯ 25 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ರಾಜಕೀಯ ಪ್ರಾತಿನಿಧ್ಯ, ಸ್ಥಾನಮಾನ ಹಂಚಿಕೆ ವಿಷಯದಲ್ಲಿ ಗೊಂದಲ ಉಂಟಾಗಿದ್ದು, ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕು. ಅಲ್ಲದೆ, ಜನಪರ ಹಿತದೊಂದಿಗೆ ಅಭಿವೃದ್ಧಿ ಕೆಲಸಗಳಾಗಬೇಕು ಎಂಬ ಉದ್ದೇಶವಿದೆಯೇ ಹೊರತು ವೈಯಕ್ತಿಕ ಬೇಡಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್ ಸೇರುತ್ತಿಲ್ಲ ಎಂದು ತಿಳಿಸಿದರು.
ಪತಿಗೆ ಎಂಎಲ್ಸಿ ಟಿಕೆಟ್ಗಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ ಎಂಬ ಮಾತು ಕೇಳಿಬರುತ್ತಿದ್ದು, ಅದಕ್ಕಾಗಿ ಅಲ್ಲ. ಕೇಳುವುದು ಶ್ರೀನಿವಾಸ್ ಅವರ ಹಕ್ಕು. ಟಿಕೆಟ್ ಸಿಕ್ಕಲ್ಲಿ ಸಂತೋಷ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.