ರೋಣ: ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳ ಪರಿಷ್ಕರಣೆಗಾಗಿ ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಬಿಎಲ್ಒಗಳ(ಬೂತ್ ಮಟ್ಟದ ಅಧಿಕಾರಿಗಳು) ಸಭೆ ಕಾಟಾಚಾರಕ್ಕಾಗಿ ಕರೆದಂತಿತ್ತು.
ಬೆಳಗ್ಗೆ ಸರಿಯಾಗಿ 10.30ಕ್ಕೆ ಸಭೆಗೆ ಆಗಮಿಸುವಂತೆ ತಾಲೂಕಿನ ಎಲ್ಲ ಬಿಎಲ್ಒಗಳಿಗೆ ಮೊದಲೇ ನೋಟಿಸ್ ನೀಡಲಾಗಿದ್ದರಿಂದ ಬಹುತೇಕರು ಸಮಯಕ್ಕೆ ಸರಿಯಾಗಿ ಆಗಮಿಸಿದ್ದರು. ಆದರೆ, ಸಭೆಯ ಅಧ್ಯಕ್ಷತೆ ವಹಿಸಬೇಕಿದ್ದ ತಹಸೀಲ್ದಾರ್ ಜಿ.ಬಿ. ಜಕ್ಕನಗೌಡ್ರ ಮಧ್ಯಾಹ್ನ 12 ಗಂಟೆಗೆ ಆಗಮಿಸಿ ಎಲ್ಲ ಬಿಎಲ್ಒಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿ, ಚುನಾವಣೆಗೆ ಸಂಬಂಧಿಸಿದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚಿಸಿ ಕೇವಲ ಐದು ನಿಮಿಷದಲ್ಲಿ ಸಭೆ ಮುಗಿಸಿದರು.
ಚುನಾವಣೆಗೆ ಸಂಬಂಧಿಸಿದ ಸಭೆ ತಪ್ಪಿಸಲು ಬರುವುದಿಲ್ಲ. ಹಾಗಾಗಿ, ಸಭೆಯ ನೋಟಿಸ್ನಲ್ಲಿ ತಿಳಿಸಿರುವಂತೆ ಬೆಳಗ್ಗೆ 10.30ಕ್ಕೆ ಬಂದಿದ್ದೇನೆ. ಮಧ್ಯಾಹ್ನ 12 ಗಂಟೆಯಾದರೂ ಸಭೆ ಪ್ರಾರಂಭವಾಗುತ್ತಿಲ್ಲ. ಅಲ್ಲಿ ನೋಡಿದರೆ ಪುರಸಭೆಯಲ್ಲಿ ಜನ ಕಾಯುತ್ತಿದ್ದಾರೆ, ಏನು ಮಾಡುವುದು ಅರ್ಥವಾಗುತ್ತಿಲ್ಲ.
| ನೂರುಲ್ಲಾಖಾನ್ ಮುಖ್ಯಾಧಿಕಾರಿ, ಪುರಸಭೆ, ರೋಣ
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಭೆ ನಡೆಸಿದ್ದೇವೆ. ಸಭೆ ನಡೆದ ಬಗ್ಗೆ ಒಂದು ಫೋಟೋ ತೆಗೆದು ಕಳುಹಿಸಿ ಬಿಟ್ಟರೆ ಆಯಿತು.
| ಹೆಸರು ಹೇಳಲಿಚ್ಛಿಸದ ಕಂದಾಯ ಇಲಾಖೆ ಅಧಿಕಾರಿ