ಮೈಸೂರು: ಎರಡು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ಗೆ ( ಕೆಬಿಬಿಪಿಎಲ್-2022) ಶನಿವಾರ ಸಂಜೆ ಚಾಲನೆ ದೊರೆಯಿತು.
ಮಹಾರಾಜ ಬಾಲ್ ಬ್ಯಾಡ್ಮಿಂಟನ್ ಕ್ಲಬ್, ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಕರ್ನಾಟಕ, ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದಲ್ಲಿ ನಗರದ ಹಾರ್ಡ್ವಿಕ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪಂದ್ಯಾವಳಿಗೆ ಮಳೆ ಅಡ್ಡಿ ಆಯಿತು. ಇದರಿಂದ ಸಾಂಕೇತಿಕವಾಗಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ದೇಶದಲ್ಲಿ ಇದೇ ಮೊದಲ ಬಾರಿಗೆ ಬಾಲ್ ಬ್ಯಾಡ್ಮಿಂಟನ್ ಲೀಗ್ ನಡೆಸಲಾಗುತ್ತಿದೆ. ಇದರಲ್ಲಿ ರಾಜ್ಯದ ವಿವಿಧ ಭಾಗಗಳ ಪ್ರತಿಭಾವಂತ ಆಟಗಾರರು ಮತ್ತು ಉದಯೋನ್ಮುಖ ಪ್ರತಿಭೆಗಳು ಪಾಲ್ಗೊಂಡಿವೆ. ಪ್ರಶಸ್ತಿಗಾಗಿ 10 ತಂಡಗಳು ಪೈಪೋಟಿ ನಡೆಸಲಿವೆ. ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ಜರುಗಲಿದೆ.
ಪ್ರತಿ ತಂಡ 8 ಆಟಗಾರರನ್ನು ಒಳಗೊಂಡಿದೆ. ಬೆಂಗಳೂರು, ಕೋಲಾರ, ಬಳ್ಳಾರಿ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹೀಗೆ ರಾಜ್ಯದ ವಿವಿಧ ಜಿಲ್ಲೆಗಳ ಆಟಗಾರರು 1 ಸಾವಿರ ರೂ. ಮೂಲ ದರದಿಂದ 5 ಸಾವಿರ ರೂ.ವರೆಗೆ ಮಾರಾಟವಾಗಿದ್ದು, ಇದರಲ್ಲಿ ಬಿ.ಎನ್.ಕಿರಣ್ಕುಮಾರ್, ಎಂ.ಎಸ್.ಸತ್ಯ, ಮಹದೇವಸ್ವಾಮಿ, ಆರ್.ಸಂಜಯ್, ಮಹದೇವು, ತರುಣ್ಕುಮಾರ್, ಆರ್.ವಿಜಯಕುಮಾರ್, ಬಿ.ಕೆ.ಚೇತನ್, ಎಚ್.ಕೆ.ತೇಜಸ್ ಅತಿ ಹೆಚ್ಚಿನ ಬೆಲೆಗೆ ಬಿಡ್ ಆಗಿದ್ದಾರೆ.
ಉದ್ಘಾಟನೆ: ಪಂದ್ಯಾವಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಗೋವಿಂದರಾಜು ಚಾಲನೆ ನೀಡಿದರು.
ಮಹಾರಾಜ ಬಾಲ್ ಬ್ಯಾಡ್ಮಿಂಟನ್ ಕ್ಲಬ್ನ ಬಿ.ಟಿ.ಲಕ್ಷ್ಮೀಶ್, ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಏಷ್ಯಾದ ಪ್ರಧಾನ ಕಾರ್ಯದರ್ಶಿ ವೈ.ರಾಜರಾವ್, ಬಿಬಿಎಫ್ಐ ಪ್ರಧಾನ ಕಾರ್ಯದರ್ಶಿ ದಿನೇಶ್, ಎಂಡಿಬಿಬಿಎ ಪ್ರಧಾನ ಕಾರ್ಯದರ್ಶಿ ಲೋಕೇಶ್ ಪಿಯಾ, ಮಹಾರಾಜ ಪಿಯು ಕಾಲೇಜಿನ ಪ್ರಾಂಶುಪಾಲ ಎನ್.ಉದಯಶಂಕರ್, ಮಹಾರಾಜ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಕಾರ್ಯದರ್ಶಿ ಸತ್ಯನಾರಾಯಣ, ಖಜಾಂಚಿ ನಟರಾಜು, ಸಂಘಟನಾ ಕಾರ್ಯದರ್ಶಿ ಮಹದೇವ್, ಕಾರ್ಯಕಾರಿಣಿ ಸಮಿತಿ ಸದಸ್ಯ ಮುರಳಿ ಇದ್ದರು.