ಬೆಳಗಾವಿ: ಕರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ರಿಯಾಯಿತಿ ಬಸ್ಪಾಸ್ ಅವಧಿ ವಿಸ್ತರಣೆಗೆ ಅವಕಾಶ ಕಲ್ಪಿಸಿದ್ದರಿಂದ ಗುರುವಾರ ಕೇಂದ್ರ ಬಸ್ ನಿಲ್ದಾಣದಲ್ಲಿ ಏಕಕಾಲದಲ್ಲಿ ವಿದ್ಯಾರ್ಥಿಗಳು ಜಮಾಯಿಸಿದ್ದರಿಂದ ಕೆಲ ಹೊತ್ತು ಗದ್ದಲದ ವಾತಾವರಣ ನಿರ್ಮಾಣವಾಯಿತು. ಕರೊನಾ ಹಿನ್ನೆಲೆಯಲ್ಲಿ ತರಗತಿಗಳು ಪೂರ್ಣಗೊಂಡಿಲ್ಲ. ಹೀಗಾಗಿ, ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ಗಳನ್ನು ಜುಲೈ ಮತ್ತು ಆಗಸ್ಟ್ ತಿಂಗಳವರೆಗೆ ವಿಸ್ತರಿಸಲಾಗುತ್ತಿದೆ. ಜೂನ್ 30 ಪಾಸ್ನ ಕೊನೆ ದಿನವಾಗಿತ್ತು. ವಿದ್ಯಾರ್ಥಿಗಳು ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ 1 ಗಂಟೆಗೆ ಹಾಜರಾಗಿದ್ದರಿಂದ ನೂಕು ನುಗ್ಗಲು ಉಂಟಾಯಿತು. ತಕ್ಷಣ ಸಾರಿಗೆ ಸಂಸ್ಥೆಯ 28 ಸಿಬ್ಬಂದಿ 14 ಕೌಂಟರ್ ತೆರೆದು ಪಾಸ್ ವಿತರಣೆ ಆರಂಭಿಸಿದರು. ಜುಲೈ 3ರ ವರೆಗೆ ವಿದ್ಯಾರ್ಥಿಗಳ ಹಳೇ ಪಾಸ್ಗಳು ಚಾಲ್ತಿಯಲ್ಲಿರುತ್ತವೆ. ಈ ದಿನಾಂಕದೊಳಗೆ ಪಾಸ್ ಅವಧಿ ವಿಸ್ತರಿಸಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.