ವಿಜಯಪುರ: ಕರೊನಾ ವಾರಿಯರ್ಸ್ ಎಂದೆಲ್ಲಾ ಪ್ರಶಂಸೆಗೆ ಭಾಜನವಾದ ಪೌರಕಾರ್ಮಿಕರ ಬದುಕಿನ ಜೊತೆಗೆ ಇಲ್ಲಿನ ಪುರಸಭೆ ಚೆಲ್ಲಾಟವಾಡುತ್ತಿದೆ.
ಮಹಾಮಾರಿ ಕರೊನಾ ಬೆಂಬಿಡದೇ ಕಾಡುತ್ತಿದ್ದರೆ ಇತ್ತ ಪುರಸಭೆ ಸಿಬ್ಬಂದಿ ಯಾವುದೇ ಮುಂಜಾಗೃತೆ ಕ್ರಮ ಇಲ್ಲದೇ, ಸ್ವಚ್ಛತೆಗೆ ಸಲಕರಣೆಗಳಿಲ್ಲದೇ ಒಳಚರಂಡಿ ಸ್ವಚ್ಛಗೊಳಿಸಲು ಕಾರ್ಮಿಕರನ್ನು ಬಳಸಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿಯ ಪೌರ ಕಾರ್ಮಿಕರೊಬ್ಬರು ಮುಂಜಾಗೃತ ಕ್ರಮವಿಲ್ಲದೆ ಕೈಗವಸ, ಮಾಸ್ಕ ಬಳಸದೆ ಒಳಚರಂಡಿ ಗುಂಡಿಗೆ ಕೈ ಹಾಕಿ ಮಲ ಹೊರ ತೆಗೆಯುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿದೆ.
ಸಿಂದಗಿ ಪುರಸಭೆಯ ಸಿಬ್ಬಂದಿ ವರ್ಗ ಸರಿಯಾದ ಮುಂಜಾಗೃತ ಸುರಕ್ಷಾ ಸಮವಸ್ತ್ರ ನೀಡದೆ ಪೌರಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಕರೋನಾ ವೈರಸ್ ಭೀತಿಯಲ್ಲೂ ರೋಗದ ಅರಿವಿಲ್ಲದೆ ಅಧಿಕಾರಿವರ್ಗ ಬೇಜಾವಾಬ್ದಾರಿತನ ಪ್ರದರ್ಶನ ಮಾಡುತ್ತಿದೆ ಎಂದು ಸಿಂದಗಿ ಪಟ್ಟಣದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅದಕ್ಕಾಗಿ ಈ ಘಟನೆ ಕಾರಣರಾದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಹ ಸ್ಥಳೀಯರು ಒತ್ತಾಯಿಸಿದ್ದಾರೆ.