ಗುಡೂರ ಎಸ್.ಸಿ.: ದಸರಾ ಹಬ್ಬದ ಅಂಗವಾಗಿ ಗ್ರಾಮದ ಬನಶಂಕರಿ ದೇವಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ನವರಾತ್ರಿ ಉತ್ಸವಕ್ಕೆ ಗುರುವಾರ ಮಂಗಳ ಹಾಡಲಾಯಿತು.
ಬುಧವಾರ ಸಾಂಪ್ರದಾಯಿಕವಾಗಿ ಖಂಡೇ ಪೂಜೆ ನೆರವೇರಿಸಲಾಯಿತು. ಒಂಬತ್ತು ದಿನಗಳ ಕಾಲ ದೇವಿ ಮಹಾತ್ಮೆ ಪುರಾಣ ಪ್ರವಚನ ಹಾಗೂ ಬನಶಂಕರಿ ದೇವಿಗೆ ಅಭಿಷೇಕ, ಹೂವಿನ ಅಲಂಕಾರ, ಮಂಗಳಾರತಿ, ಅನ್ನ ಸಂತರ್ಪಣೆ, ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗುರುವಾರ ಬನಶಂಕರಿ ದೇವಿಗೆ ವಿಶೇಷ ಪೂಜೆ ಬಳಿಕ ದೀಪದ ಡಿವಟಗಿ ಹಿಡಿದು ಸಾಗಿದ ಪಾಲಕಿ ಮೆರವಣಿಗೆ ಮಾಬುಸಾಬನ ಕಟ್ಟಿ, ಮಾರುಕಟ್ಟೆ ಮಾರ್ಗವಾಗಿ ಬನಶಂಕರಿ ಪಾದಗಟ್ಟಿ ತಲುಪಿತು. ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಿತು. ದೇವಾಂಗ ಸಮಾಜದ ಹಿರಿಯರು, ದೇವಲ ಮಹರ್ಷಿ ತರುಣ ಸಂಘದ ಕಾರ್ಯಕರ್ತರು, ಮಹಿಳೆಯರು, ಯುವಕ, ಯುವತಿಯರು, ಸಾರ್ವಜನಿಕರು ಇದ್ದರು.