ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ 10,000 ರೂ. ಇದ್ದ ಪರ್ಸ್ ಮರಳಿ ಕೊಡುವ ಮೂಲಕ ಚಾಲಕ ಹಾಗೂ ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ಚಾಲಕ ಆರ್.ಎನ್. ಮಾಳವಾಡ ಹಾಗೂ ನಿರ್ವಾಹಕ ಆರ್.ಡಿ. ದೇವಗಾಂವಕರ ಪ್ರಾಮಾಣಿಕತೆ ಮೆರೆದವರು.
ಹುಬ್ಬಳ್ಳಿ ವಿಭಾಗದ ಗ್ರಾಮಾಂತರ 1ನೇ ಘಟಕದ ಬಸ್ ಶುಕ್ರವಾರ ಇಳಕಲ್ನಿಂದ ಹುಬ್ಬಳ್ಳಿಗೆ ಬರುತ್ತಿತ್ತು. ಕುಳಗೇರಿ ಕ್ರಾಸ್ನಿಂದ ಹುಬ್ಬಳ್ಳಿ ನಿವಾಸಿ ಸಂತೋಷ ಎಂಬುವರು ಬಸ್ ಹತ್ತಿದ್ದರು. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಪರ್ಸ್ ಬಿಟ್ಟು ಹೋಗಿದ್ದರು. ಅದನ್ನು ಗಮನಿಸಿದ ನಿರ್ವಾಹಕ ಹಾಗೂ ಚಾಲಕರು ಪ್ರಯಾಣಿಕರನ್ನು ಪತ್ತೆ ಹಚ್ಚಿ ಮೇಲಧಿಕಾರಿಗಳ ಸಮ್ಮುಖದಲ್ಲಿ ಶುಕ್ರವಾರ ಪರ್ಸ್ ಮರಳಿಸಿದ್ದಾರೆ.
ಪ್ರಾಮಾಣಿಕತೆ ಮೆರೆದೆ ಚಾಲಕ, ನಿರ್ವಾಹಕರನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಅಭಿನಂದಿಸಿದ್ದಾರೆ.