ಯಲ್ಲಾಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಮಾಗೋಡ ಜಲಪಾತ ಹಾಗೂ ಜೇನುಕಲ್ಲು ಗುಡ್ಡಗಳಿಗೆ ಆಗಸ್ಟ್ 7ರವರೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಕುರಿತು ಸ್ಥಳೀಯ ಗ್ರಾಮ ಅರಣ್ಯ ಸಮಿತಿ ನಿರ್ಣಯಿಸಿದ್ದು, ಮೊಟ್ಟೆಗದ್ದೆ ಬಳಿ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್ಟ ಕಿರಕುಂಭತ್ತಿ ನೇತೃತ್ವದಲ್ಲಿ ಗ್ರಾಮಸ್ಥರು ಗೇಟ್ ಹಾಕಿ ಪ್ರವಾಸಿಗರ ವಾಹನಗಳು ಬಾರದಂತೆ ತಡೆಯೊಡ್ಡಿದ್ದಾರೆ.
ಮಳೆಗಾಲವಾಗಿರುವುದರಿಂದ ಈ ದಿನಗಳಲ್ಲಿ ಜಲಪಾತ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಈ ಎರಡೂ ಪ್ರವಾಸಿ ತಾಣಗಳಿಗೆ ಹೊರ ಜಿಲ್ಲೆಗಳಿಂದ ಅಧಿಕ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದು, ಕರೊನಾ ವ್ಯಾಪಿಸುತ್ತಿರುವ ಈ ದಿನಗಳಲ್ಲಿ ಪ್ರವಾಸಿಗರು ಬಂದರೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಮಾಸ್ಕ ಧರಿಸದವರಿಗೆ ದಂಡ
ಯಲ್ಲಾಪುರ: ಪಟ್ಟಣದಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಸಾರ್ವಜನಿಕರಿಗೆ ಶುಕ್ರವಾರ ಪಟ್ಟಣ ಪಂಚಾಯಿತಿ ಸಿಬ್ಬಂದಿ ದಂಡ ವಿಧಿಸಿದರು. 60ಕ್ಕೂ ಹೆಚ್ಚು ಸಾರ್ವಜನಿಕರಿಗೆ ಪ.ಪಂ ಮುಖ್ಯಾಧಿಕಾರಿ ಅರುಣ ನಾಯಕ ಮಾರ್ಗದರ್ಶನದಲ್ಲಿ ಸಿಬ್ಬಂದಿ ದಂಡ ಹಾಕಿ, ಮಾಸ್ಕ್ ಧರಿಸುವಂತೆ ಸೂಚನೆ ನೀಡಿದರು. ಒಟ್ಟು 6000 ಸಾವಿರ ರೂ ದಂಡ ವಸೂಲಿ ಮಾಡಲಾಗಿದೆ. ಪ.ಪಂ. ಸಿಬ್ಬಂದಿ ಸುರೇಶ ತುಳಸೀಕರ, ಸಂತೋಷ, ವೆಂಕಟ್ರಮಣ, ರಮೇಶ ಹಾಗೂ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.