More

    ಪ್ರಚಾರ ವಾಹನಗಳಿಗೆ ಎಸ್ಸೆಸ್ ಚಾಲನೆ  -ಮಹಾಧಿವೇಶನದಲ್ಲಿ ಜಾತಿಗಣತಿ ಚರ್ಚೆ 

    ದಾವಣಗೆರೆ: ನಗರದಲ್ಲಿ ಡಿ.23,24ರಂದು ಆಯೋಜಿಸಲಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದ ಹಿನ್ನೆಲೆಯಲ್ಲಿ ಪ್ರಚಾರ ವಾಹನಗಳಿಗೆ ಭಾನುವಾರ ಚಾಲನೆ ನೀಡಲಾಯಿತು.
    ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಪ್ರಚಾರ ವಾಹನಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ, ಮಹಾಸಭಾದ 24ನೇ ಮಹಾ ಅಧಿವೇಶನದ ಪ್ರಚಾರಕ್ಕಾಗಿ ನಾಲ್ಕು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕು, ಗ್ರಾಮಗಳಿಗೆ ತೆರಳಿ ಅಧಿವೇಶನದ ಬಗ್ಗೆ ಪ್ರಚಾರ ಮಾಡಲಿವೆ ಎಂದರು.
    ಅಧಿವೇಶನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಅವರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
    ಜಾತಿ ಗಣತಿ, ವೀರಶೈವ ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡುವ ವಿಷಯಗಳು ಅಧಿವೇಶನದಲ್ಲಿ ಚರ್ಚೆಯಾಗಲಿವೆ. ಸಮಾಜ ಎದುರಿಸುತ್ತಿರುವ ಸಮಸ್ಯೆಗಳು, ಬೇಡಿಕೆಗಳು ಮತ್ತಿತರ ವಿಚಾರಗಳ ಬಗ್ಗೆಯೂ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
    ಜಾತಿ ಗಣತಿ ವಿಚಾರವಾಗಿ ವಿರೋಧ ಇರುವ ಕಾರಣಕ್ಕೆ ಬಹಿರಂಗ ಪಡಿಸುವುದು ಬೇಡ ಎಂಬುದಾಗಿ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ. ಅಧಿವೇಶನದಲ್ಲಿ ಜಾತಿಗಣತಿ ವಿಚಾರದ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
    ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಮಾತನಾಡಿ, ಮಹಾಸಭಾದ 24ನೇ ಮಹಾ ಅಧಿವೇಶನಕ್ಕಾಗಿ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ 300-140 ಅಡಿ ಸುತ್ತಳತೆಯ ವಿಶಾಲ ಸಭಾಂಗಣ, ವೇದಿಕೆ ನಿರ್ಮಿಸಲಾಗುವುದು ಎಂದರು.
    ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ, ಪ್ರಧಾನ ಕಾರ್ಯದರ್ಶಿ ರೇಣುಕ ಪ್ರಸಾದ್, ಕೆ.ಜಿ. ಶಿವಕುಮಾರ್, ಎಂ.ಜಿ. ಈಶ್ವರಪ್ಪ, ಬಾ.ಮ. ಬಸವರಾಜಯ್ಯ, ಬಿ.ಜಿ. ರಮೇಶ್, ಶಂಭು ಉರೇಕೊಂಡಿ, ಐನಳ್ಳಿ ಶುಭಮಂಗಳಾ, ಪುಷ್ಪಾ ವಾಲಿ, ನಿರ್ಮಲಾ ಸುಭಾಷ್, ಕವಿತಾ ಚಂದ್ರಶೇಖರ್, ಪ್ರಕಾಶ್ ಪಾಟೀಲ್, ಸುಷ್ಮಾ ಪಾಟೀಲ್, ಶಿವರತನ್, ಎ.ಎಚ್. ಕೊಟ್ರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts