ಹಾಸನ: ಪೆನ್ಡ್ರೈವ್ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ. ಎಸ್ಐಟಿ ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದರೂ ಕೂಡ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ವಿನಾಃಕಾರಣ ಆರೋಪ ಮಾಡುತ್ತಿದ್ದಾರೆ. ಆತ ಸಂತ್ರಸ್ತೆಯರಿಗೆ ಬ್ಲಾೃಕ್ಮೇಲ್ ಮಾಡಿ ಹಣ ಸಂಗ್ರಹ ಮಾಡಿದ್ದಾರೆ ಎಂಬ ದೂರು ಕೇಳಿಬರುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಮಹೇಶ್ ಗಂಭೀರ ಆರೋಪ ಮಾಡಿದರು.
ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಜಿಲ್ಲೆಗೆ ಕೆಟ್ಟ ಹೆಸರು ತರಲಾಗಿದೆ. ಈ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಪ್ರಮುಖ ಆರೋಪಿ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಆದರೆ ದೇವರಾಜೇಗೌಡ ವಿನಾಃಕಾರಣ ಸರ್ಕಾರದ ಮೇಲೆ ಗೂಬೆ ಕೂರಿಸಲು ಉಪಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದುದ್ದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇವರಾಜೇಗೌಡ ಇಷ್ಟು ವರ್ಷಗಳ ಕಾಲ ರೇವಣ್ಣ ಅವರ ಕುಟುಂಬದ ಮೇಲೆ ಆರೋಪ ಮಾಡುತ್ತಾ ಬಂದಿದ್ದು, ಈ ಹಿಂದೆಯೂ ಕೂಡ ವಿಡಿಯೋ ಇರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಆತ ಆಸೆ-ಆಮಿಷಗಳಿಗೆ ಬಲಿಯಾಗಿ ಯೂ ಟರ್ನ್ ಹೊಡೆಯುವ ಮೂಲಕ ತಲೆ ಕೆಟ್ಟವರ ರೀತಿ ಮಾತನಾಡುತ್ತಿದ್ದಾರೆ ಎಂದು ಕಿರಿಕಾರಿದರು.
ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ದೇವರಾಜೇಗೌಡನನ್ನು ಬಂಧಿಸಿ ಇದರ ಮೂಲ ರೂವಾರಿಗಳು ಯಾರು? ಎಂಬುದರ ಬಗ್ಗೆ ತನಿಖೆಯಾಗಬೇಕು. ಹೆಣ್ಣು ಮಕ್ಕಳ ಜೀವನದ ಜತೆ ಚೆಲ್ಲಾಟವಾಡುತ್ತಿರುವ ದೇವರಾಜೇಗೌಡ ಸಂತ್ರಸ್ತೆಯರಿಗೆ ಅವರ ಫೋಟೋ ತೋರಿಸಿ ಕೋಟಿ ಕೋಟಿ ಹಣ ಸಂಗ್ರಹಿಸಿದ್ದಾನೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದರ ಬಗ್ಗೆಯೂ ಕೂಡ ಸೂಕ್ತ ತನಿಖೆಯಾಗಬೇಕು. ದೇವರಾಜೇಗೌಡ ಒಬ್ಬ ಬ್ಲಾೃಕ್ಮೇಲ್ ವ್ಯಕ್ತಿಯಾಗಿದ್ದು ಈತ ವಕೀಲ ವೃತ್ತಿ ಮಾಡಲು ನಾಲಾಯಕ್. ಅಶ್ಲೀಲ ವಿಡಿಯೋಗಳಿಗೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿದ್ದ. ಅಲ್ಲದೆ ಈತನಿಗೆ ಕಾರ್ತಿಕ್ ವಿಡಿಯೋ ಕೊಟ್ಟಿರುವ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಆದ್ದರಿಂದ ಕಾರ್ತಿಕ್ ಮತ್ತು ದೇವರಾಜೇಗೌಡರನ್ನು ಬಂಧಿಸಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದರು.
ಇಷ್ಟೆಲ್ಲಾ ಘಟನೆ ನಡೆದ ಮೇಲೂ ದೇವರಾಜೇಗೌಡ ಅವರು ಡಿ.ಕೆ. ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಿದ್ದು, ಇದಕ್ಕೆ ಯಾವುದೇ ಹುರುಳಿಲ್ಲ. ಪ್ರಕರಣವನ್ನು ಎಸ್ಐಟಿ ಈಗಾಗಲೇ ತನಿಖೆ ನಡೆಸುತ್ತಿದ್ದು, ತನಿಖೆ ಸಂದರ್ಭದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ. ಶೀಘ್ರದಲ್ಲಿ ಎಲ್ಲರನ್ನು ಬಂಧಿಸಿ ಸತ್ಯಾಂಶವನ್ನು ಹೊರಗೆಳೆಯಲಿದೆ ಎಂದು ಹೇಳಿದರು.