ಗುಂಡ್ಲುಪೇಟೆ: ಸರ್ಕಾರದಿಂದ ಗಾಂಧಿ ಗ್ರಾಮ ಪುರಸ್ಕಾರದಡಿ ದೊರೆತ 5 ಲಕ್ಷ ರೂ. ನಗದನ್ನು ಸೌರ ವಿದ್ಯುತ್ ಅಳವಡಿಕೆಗೆ ವಿನಿಯೋಗಿಸಲಾಗುವುದು ಎಂದು ಹುಂಡೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಕೆ.ಲಕ್ಷ್ಮೀ ಮಂಜುನಾಥ್ ಹೇಳಿದರು.
ಗ್ರಾಪಂ ಆವರಣದಲ್ಲಿ ಮಾತನಾಡಿದ ಅವರು, ಗ್ರಾಪಂ ಅಮೃತ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸರ್ಕಾರ ನೀಡಿದ 25 ಲಕ್ಷ ರೂ. ಅನುದಾನದಲ್ಲಿ ಪಂಚಾಯಿತಿ ವ್ಯಾಪ್ತಿಯ ಆರು ಗ್ರಾಮಗಳ ಸರ್ಕಾರಿ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಗಳು, ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಕುಳಿತುಕೊಳ್ಳಲು ಕುರ್ಚಿ ಹಾಗೂ ಟೇಬಲ್, ಕಲಿಕೆಗೆ ಆಟದ ಸಾಮಗ್ರಿಗಳು, ಡಿಜಿಟಲ್ ಲೈಬ್ರರಿಯಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಉಪಯೋಗವಾಗುವಂತ ಪುಸ್ತಕಗಳು ಮತ್ತು ಅಂಧ ವಿದ್ಯಾರ್ಥಿಗಳ ಕಲಿಕಾ ಉಪಕರಣಗಳನ್ನು ನೀಡಲಾಗಿದೆ. ಇದೀಗ ಗಾಂಧಿ ಗ್ರಾಮ ಪುರಸ್ಕಾರದ 5 ಲಕ್ಷ ರೂ. ನಗದನ್ನು ಸೋಲಾರ್ ವಿದ್ಯುತ್ ದೀಪ ಅಳವಡಿಕೆಗೆ ಬಳಕೆ ಮಾಡಲಾಗುವುದು ಎಂದು ಹೇಳಿದರು. ಉಪಾಧ್ಯಕ್ಷ ನಂಜಪ್ಪ, ಸದಸ್ಯರಾದ ಡಿ.ಮಾಧು, ಶಿವಬಸಪ್ಪ, ಡಿ.ರಾಜು, ಎಚ್.ಪಿ.ಮಹೇಂದ್ರ, ಆನಂದ, ಸಾಕಮ್ಮ, ಅಂಬಿಕಾ, ಮಹೇಶ್ವರಿ, ಪಾರ್ವತಿ, ಪುಟ್ಟಮಾದಮ್ಮ, ನೀಲಮ್ಮ, ಪಿಡಿಒ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ಇದ್ದರು.