ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ಮದ್ಯದ ಬಾಟಲಿ, ಟೆಟ್ರಾ ಪ್ಯಾಕೆಟ್ಗಳು ರಾಶಿ ರಾಶಿಯಾಗಿ ಬಿದ್ದಿದ್ದು, ಅಧಿಕಾರಿಗಳ ಕಾರ್ಯವೈಖರಿಯನ್ನು ಅಣಕಿಸುವಂತಿದೆ.
ಕೇಂದ್ರ ಕಚೇರಿಗೆ ಹೊಂದಿಕೊಂಡು ಪಾಲಿಕೆ ಒಡೆತನದ ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವಿದ್ದು, ನಿತ್ಯ ನೂರಾರು ಜನರು ಇಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಅದೇ ರೀತಿ ಪಾಲಿಕೆ ಕಾಂಪೌಂಡ್ ಹೊರಗೆ 3-4 ಮರದ ಕಟ್ಟೆಯ ಮೇಲೂ ಹಲವಾರು ಜನರು ಕುಳಿತಿರುತ್ತಾರೆ. ಇವರಲ್ಲಿ ಕೆಲವರು ನಿರ್ಗತಿಕರು, ಭಿಕ್ಷುಕರು ಇದ್ದಾರೆ.
ಲಾಕ್ಡೌನ್ ಪರಿಣಾಮ ಮದ್ಯದಂಗಡಿಗಳಲ್ಲಿ ಮಾರಾಟಕ್ಕೆ ಮಾತ್ರ ಅವಕಾಶವಿದೆ. ಮದ್ಯ ಸೇವನೆಗೆ ಅವಕಾಶವಿಲ್ಲ. ಇದರಿಂದ ಪಾಲಿಕೆಯ ಆವರಣವನ್ನೇ ಕುಡುಕರು ಅಡ್ಡೆ ಮಾಡಿಕೊಂಡಿದ್ದಾರೆ. ಪಾರ್ಸಲ್ ತರುವ ಕುಡುಕರು ಗಿಡಗಳ ಮರೆಯಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದಾರೆ. ಖೋಡೇಸ್ ವಿಸ್ಕಿ, ಬೆಂಗಳೂರು ವಿಸ್ಕಿ ಇನ್ನಿತರ ಬ್ರ್ಯಾಂಡ್ಗಳ ಮದ್ಯದ ಬಾಟಲಿ, ಟೆಟ್ರಾ ಪ್ಯಾಕೆಟ್ಗಳು ಬಿದ್ದಿವೆ. ಸಂಜೆಯಾಗುತ್ತಿದ್ದಂತೆ ಕುಡುಕರ ಹಾವಳಿ ಜಾಸ್ತಿಯಾಗುತ್ತಿದ್ದು, ಯಾರೂ ಹೇಳುವವರು, ಕೇಳುವವರು ಇಲ್ಲವೇ? ಇದು ಪಾಲಿಕೆಯ ಕೇಂದ್ರ ಕಚೇರಿಯಾಗಿರುವುದರಿಂದ ಆವರಣದಲ್ಲಿ ಸಿಸಿ ಟಿವಿ ಕ್ಯಾಮರಾ ವ್ಯವಸ್ಥೆ ಇದೆ. ಭದ್ರತಾ ಸಿಬ್ಬಂದಿ ಇರುತ್ತಾರೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ (ಸಹಾಯವಾಣಿ)ನಲ್ಲೂ 5-6 ಸಿಬ್ಬಂದಿ ಸದಾ ಇರುತ್ತಾರೆ. ಆದರೂ ಇವರ ಗಮನಕ್ಕೆ ಬರದೇ ಇರುವುದು ಆಶ್ಚರ್ಯ ಮೂಡಿಸಿದೆ.