ಯಲ್ಲಾಪುರ: ಮಾನವ ಆಧುನಿಕ ಜಗತ್ತಿನಲ್ಲಿ ಮೈಮರೆತು ಪರಿಸರದ ಕುರಿತ ನಿಷ್ಕಾಳಜಿ ವಹಿಸಿದ ಪರಿಣಾಮವೇ ಒಂದರ ಮೇಲೊಂದು ವಿಚಿತ್ರ ರೋಗಗಳು ನಮ್ಮನ್ನು ಬಾಧಿಸಲು ಕಾರಣವಾಗಿದೆ ಎಂದು ನಂದೊಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀಧರ ಗುಮ್ಮಾನಿ ಹೇಳಿದರು.
ತಾಲೂಕಿನ ಮಾಗೋಡಿನಲ್ಲಿ ಇಬ್ಬನಿ ಫೌಂಡೇಷನ್ ಆಶ್ರಯದಲ್ಲಿ ಏರ್ಪಡಿಸಿದ್ದ ಪರಿಸರ ದಿನಾಚರಣೆಯಲ್ಲಿ ರೈತರಿಗೆ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು.
ಗಿಡ-ಮರಗಳ ಪೋಷಣೆಯಿಂದ ವಾತಾವರಣ ಶುದ್ಧಿಯಾಗುವ ಜತೆಗೆ ನಮ್ಮ ಆರೋಗ್ಯ ವೃದ್ಧಿಯೂ ಸಾಧ್ಯವಾಗುತ್ತಿದೆ ಎಂದರು.
ಇಬ್ಬನಿ ಫೌಂಡೇಷನ್ ಅಧ್ಯಕ್ಷ ವಿ.ಎನ್. ಹೆಗಡೆ ಹಾದಿಮನೆ ಮಾತನಾಡಿ, ಸಂಸ್ಥೆಯ ವತಿಯಿಂದ ಕಳೆದ ಕೆಲ ವರ್ಷಗಳಿಂದ ವಿವಿಧ ರೀತಿಯ ಗಿಡಗಳನ್ನು ರೈತರಿಗೆ ವಿತರಿಸಲಾಗಿದೆ. ಸಸಿ ಪಡೆದು ಕಾಟಾಚಾರಕ್ಕೆ ನೆಡುವವರಿಗಿಂತ ಆಸಕ್ತಿಯಿಂದ ಪೋಷಿಸುವವರಿಗೆ ಸಸಿ ನೀಡಲಾಗುತ್ತಿದೆ ಎಂದು ವಿವರಿಸಿದರು. ರೈತರಿಗೆ ಲಿಂಬು, ಎಕ್ಕೆ, ತುಳಸಿ ಸೇರಿ ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು.
ಇಬ್ಬನಿ ಫೌಂಡೇಷನ್ನ ನಾರಾಯಣ ಹೆಗಡೆ, ರೈತರಾದ ಗಣಪತಿ ಭಟ್ಟ, ಸುಬ್ರಾಯ ಭಟ್ಟ, ಶ್ರೀಧರ ತೊಂಡೆಕೆರೆ, ಸುದರ್ಶನ ಭಟ್ಟ, ಶ್ರೀಧರ ಹೆಗಡೆ ಹಾದಿಮನೆ, ವಿಶ್ವೇಶ್ವರ ಭಟ್ಟ, ಶ್ರೀನಿವಾಸ ಭಟ್ಟ, ಶಂಕರ ಶಿಡ್ಲಮನೆ ಇತರರಿದ್ದರು.