ಸಿದ್ದಾಪುರ: ಲಾಕ್ಡೌನ್ ಸಡಿಲಿಕೆ ಅರ್ಥ ಪೂರ್ಣವಾಗಿರಬೇಕು ಎಂದು ಶಿರಸಿ ಸಹಾಯಕ ಆಯುಕ್ತರು ಸೂಚನೆ ನೀಡಿದ್ದಾರೆ. ಆದರೆ, ಪಟ್ಟಣದಲ್ಲಿ ಜಾರಿ ಆಗುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ.
ಲಾಕ್ಡೌನ್ ಸಂದರ್ಭದಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಸಹಕರಿಸಿದಂತೆ ಲಾಕ್ಡೌನ್ ಸಡಿಲಿಕೆ ಸಂದರ್ಭದಲ್ಲಿಯೂ ಸಾರ್ವಜನಿಕರು ಹಾಗೂ ಅಂಗಡಿಕಾರರು ಸಹಕರಿಸುವಂತೆ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಆದರೆ ಜನರು ನಿರ್ಲಕ್ಷ್ಯ ವಹಿಸಿರುವುದು ಕಂಡು ಬರುತ್ತಿದೆ.
ಲಾಕ್ಡೌನ್ ಸಡಿಲಿಕೆಯಿಂದ ಎಲ್ಲಿಯೂ ಪರಸ್ಪರ ಅಂತರ ಕಂಡು ಬರುತ್ತಿಲ್ಲ. ಅಂಗಡಿಕಾರರು, ಸಾರ್ವಜನಿಕರು ಮಾಸ್ಕ್ ಧರಿಸಿಕೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಕೆಲವರು ತಮಗೇನೂ ಆಗುವುದಿಲ್ಲ ಎಂಬ ಹುಚ್ಚು ಧೈರ್ಯದಿಂದ ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ.
ಇನ್ನು ಕೆಲವು ಅಂಗಡಿಗಳ ಮುಂದೆ ಜನರು ಗುಂಪು ಗುಂಪಾಗಿರುವುದು ಕಂಡು ಬರುತ್ತಿದೆ. ಪರಸ್ಪರ ಅಂತರ ಕಾಯ್ದುಕೊಳ್ಳಿ ಎಂದು ಅಂಗಡಿಕಾರರು ಹೇಳಿದರೆ ಅವರ ಮೇಲೆಯೇ ಜನರು ಮುನಿಸಿಕೊಳ್ಳುತ್ತಿದ್ದಾರೆ. ಲಾಕ್ಡೌನ್ ಸಡಿಲಿಕೆಯಿಂದ ಪಟ್ಟಣದಲ್ಲಿ ಎಂದೂ ಕಾಣದಂಥ ಜನರ ಓಡಾಟ, ವಾಹನಗಳ ಸಂಚಾರ ಕಂಡುಬರುತ್ತಿದೆ. ಕೆಲವರು ಯಾವುದೇ ಕೆಲಸ ಇಲ್ಲದಿದ್ದರೂ ಪಟ್ಟಣಕ್ಕೆ ಒಂದು ರೌಂಡ್ ಹೊಡೆದು ಹೋಗುತ್ತಿದ್ದು, ಅಂಥವರ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವ ಮಾತು ಕೇಳಿ ಬರುತ್ತಿದೆ.
ದಂಡದ ಬಿಸಿ: ಈಗಾಗಲೇ ಪಪಂ ಅಧಿಕಾರಿಗಳು ಸರ್ಕಾರದ ಸೂಚನೆ ಪಾಲಿಸದೇ ಇರುವವರ ಮೇಲೆ ದಂಡ ಹಾಕಿ ಬಿಸಿ ಮುಟ್ಟಿಸಿದ್ದಾರೆ. ಈವರೆಗೆ 13, 700 ರೂ. ದಂಡ ಹಾಕಲಾಗಿದೆ ಎಂದು ಪಪಂ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಪಟ್ಟಣದ ಎಲ್ಲ ಅಂಗಡಿ ಮಾಲೀಕರಿಗೆ ಅಂಗಡಿ ಎದುರು ಸ್ಯಾನಿಟೈಸರ್ ಇಡುವಂತೆ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ, ಮಾಸ್ಕ್ ಧರಿಸುವ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದನ್ನು ಪಾಲಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗವುದು. | ಕುಮಾರ ನಾಯ್ಕ ಮುಖ್ಯಾಧಿಕಾರಿ ಪಪಂ ಸಿದ್ದಾಪುರ