ಕಲಬುರಗಿ: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಸಿಯುಕೆ ಕಾರ್ಯಕಾರಿ ಮಂಡಳಿ ಸದಸ್ಯ ಪ್ರೊ.ಪ್ರಮೋದ ಬಿ.ಗಾಯ್ ಸಲಹೆ ನೀಡಿದರು.
ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡೆ, ಸಾಂಸ್ಕೃತಿಕ ಮತ್ತು ನಾವಿನ್ಯತೆ ಫೆಸ್ಟ್ ಅಂಕುರ್ ಸಮಾರೋಪದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಶಸ್ವಿ ಆದರ್ಶ ವ್ಯಕ್ತಿತ್ವಗಳನ್ನು ಅನುಸರಿಸಬೇಕು. ಯಶಸ್ವಿಯಾಗಲು ಒಬ್ಬ ವ್ಯಕ್ತಿ ಆತ್ಮವಿಶ್ವಾಸ, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ತಾಳ್ಮೆ ಹೊಂದಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಬಹಳ ಮುಖ್ಯ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸವಾಗಲಿದೆ. ಕ್ಯಾಂಪಸ್ನಿAದ ಹೊರಹೋದಾಗ ನೀವು ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ. ಕೇವಲ ಪುಸ್ತಕ ಓದುವುದು, ಪರೀಕ್ಷೆ ಬರೆದರೆ ಸಾಲದು. ನಿಜ ಜೀವನದ ಸವಾಲುಗಳನ್ನು ಎದುರಿಸಲು ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್ ಮಾತನಾಡಿ, ಕ್ರೀಡೆ ಒಂದು ಉದ್ಯಮ. ವೇಗವಾಗಿ ಬೆಳೆಯುತ್ತಿದೆ. ವಾರ್ಷಿಕವಾಗಿ ಇದು ೧೫೭೬೬ ಕೋಟಿ ರೂ.ನಷ್ಟು ನಮ್ಮ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ. ಜಿಡಿಪಿ ಶೇ.೧೧ ದರದಲ್ಲಿ ಬೆಳೆಯುತ್ತಿದೆ. ಭಾರತೀಯ ಕ್ರೀಡಾ ಸಾಮಗ್ರಿಗಳ ಉತ್ಪಾದನಾ ಉದ್ಯಮ ೨೦೦೩ರಲ್ಲಿ ೩.೬ ಶತಕೋಟಿ ಅಮೆರಿಕನ್ ಡಾಲರ್ ರಫ್ತು ಮಾಡಿದೆ. ಇದು ೨೦೨೭ರ ವೇಳೆಗೆ ೬.೯ ಶತಕೋಟಿ ಅಮೆರಿಕನ್ ಡಾಲರ್ ತಲುಪಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ.ಆರ್.ಎಸ್. ಹೆಗಡಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಸಂದೀಪ ಎನ್. ಸ್ವಾಗತಿಸಿದರು. ಡಾ.ಆಶಿಸ್ ಬೆಳಮಕರ್ ವಂದಿಸಿದರು. ಡಾ.ನಿತಿನ್ ಬಿ. ಮತ್ತು ಡಾ.ರೂಪರಾಣಿ ಸೋನಾವಾಲ್ ನಿರೂಪಣೆ ಮಾಡಿದರು.