ದೇವನಹಳ್ಳಿ: ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಜಿಲ್ಲೆಯ 1,200ಕ್ಕೂ ಹೆಚ್ಚು ಸದಸ್ಯರಿಗೆ ಆಡಳಿತದ ಕಾಯ್ದೆ, ಕಾನೂನಿನ ಬಗ್ಗೆ ಮಾಹಿತಿ ನೀಡುವ ಜತೆಗೆ ಯಾವ ರೀತಿ ಅಧಿಕಾರಿ ನಡೆಸಬೇಕು ಎಂಬ ಬಗ್ಗೆ ತಿಳಿಸಿಕೊಡಲು ತರಬೇತಿ ನೀಡಲಾಗುತ್ತಿದೆ ಎಂದು ಜಿಪಂ ಸಿಇಒ ರವಿಕುಮಾರ್ ತಿಳಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ನೂತನವಾಗಿ ಆಯ್ಕೆಯಾದ ಗ್ರಾಪಂನ ಎಲ್ಲ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇವನಹಳ್ಳಿ ತಾಲೂಕಿನಲ್ಲಿ ಆಯ್ಕೆಯಾಗಿರುವ ಆಲೂರು-ದುದ್ದನಹಳ್ಳಿ, ಆವತಿ ಹಾಗೂ ಬೆಟ್ಟಕೋಟೆ ಮೂರು ಪಂಚಾಯಿತಿಗಳ 40 ಜನ ಸದಸ್ಯರಿಗೆ 5ದಿನಗಳ ಮೊದಲ ಹಂತದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಗ್ರಾಪಂಗಳಲ್ಲಿ ಆಯ್ಕೆಯಾಗಿರುವ ಎಲ್ಲ ಪಕ್ಷಗಳ ಸದಸ್ಯರ ಸಹಕಾರದೊಂದಿಗೆ ಅಧ್ಯಕ್ಷರು ಕಾರ್ಯ ನಿರ್ವಹಿಸಬೇಕು. ಜಾತಿ, ಪಕ್ಷ ಭೇದವಿಲ್ಲದೆ ಏಕರೂಪ ಆಡಳಿತ ನೀಡಬೇಕು. ಸಂವಿಧಾನದ 73ನೇ ತಿದ್ದುಪಡಿ ನಿಯಮದಡಿ ಸರ್ಕಾರದ ಹಣ ದುರುಪಯೋಗವಾಗದ ಹಾಗೆ ಎಚ್ಚರವಹಿಸಬೇಕು ಎಂದು ಹೇಳಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ವಸಂತಕುಮಾರ್ ಮಾತನಾಡಿ, ಬೇಸಿಗೆ ಸಮೀಪಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಪ್ರಾಶಸ್ತ್ಯ ನೀಡಿ. 14 ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಬಳಸಿ ಕೊಳವೆಬಾವಿ ಕೊರೆಸಿ ಪೈಪ್ಲೈನ್ ಅಳವಡಿಸಿ, ಸ್ವಚ್ಛತೆಗೆ ಒತ್ತು ನೀಡಿ ಎಂದರು.
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಸಿ.ಎಚ್. ರಾಮಕೃಷ್ಣಯ್ಯ, ಪಿಡಿಒಗಳಾದ ಆನಂದಮ್ಮ, ಮದ್ದೂರಯ್ಯ ಮತ್ತಿತರರಿದ್ದರು.