ಚಿತ್ರದುರ್ಗ: ಸ್ವಚ್ಛವಾಹಿನಿ ಸಿಬ್ಬಂದಿಯನ್ನು ಪಂಚಾಯಿತಿ ನೌಕರರಾಗಿ ಪರಿಗಣಿಸುವಂತೆ ಆಗ್ರಹಿಸಿ ರಾಜ್ಯ ಸ್ವಚ್ಛವಾಹಿನಿ ಆಟೋ ಚಾಲಕರು ಮತ್ತು ಸಹಾಯಕರ ಸಂಘ, ಸಿಐಟಿಯು ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ವಿವಿಧ ಬೇಡಿಕೆ ಈಡೇರಿಸುವಂತೆ ಸಿಎಂಗೆ ಒತ್ತಾಯಿಸಿ ಜಿಪಂ ಸಿಇಒ ಮೂಲಕ ಮನವಿ ರವಾನಿಸಿದರು.
ಸರ್ಕಾರ ನಿಗದಿಪಡಿಸಿರುವ ಮಾಸಿಕ ವೇತನ ಸರಿಯಾದ ಸಮಯಕ್ಕೆ ನೀಡಬೇಕು. ಬಾಕಿ ವೇತನ ಬಿಡುಗಡೆಗೊಳಿಸಬೇಕು. ಪಂಚಾಯಿತಿಗಳಲ್ಲಿ ಹಾಜರಾತಿ ಪುಸ್ತಕ, ಗುರುತಿನ ಚೀಟಿ ನೀಡಬೇಕು. ಸ್ವಚ್ಛವಾಹಿನಿ ತರಬೇತಿ ಪಡೆದ ಎಲ್ಲ ಚಾಲಕರಿಗೂ ಕೂಡಲೇ ಆಟೋ ನೀಡಬೇಕು ಎಂದು ಆಗ್ರಹಿಸಿದರು.
ತರಬೇತಿ ಪಡೆಯುವವರಿಗೆ ಕೆಲಸ, ಮಾಸಿಕ ಉಚಿತ ಆರೋಗ್ಯ ತಪಾಸಣೆ, ಸೇವಾ ಅವಧಿಯಲ್ಲಿ ಕಡ್ಡಾಯವಾಗಿ ಗ್ಲೌಸ್, ಮಾಸ್ಕ್ ನೀಡಬೇಕು ಎಂದು ಸರ್ಕಾರಕ್ಕೆ ಕೋರಿದರು.
ಅಧ್ಯಕ್ಷ ಡಿ.ಎಂ.ಮಲಿಯಪ್ಪ, ಮುಖಂಡ ಸಿ.ಕೆ.ಗೌಸ್ಪೀರ್, ಪದಾಧಿಕಾರಿಗಳಾದ ಎನ್.ನಿಂಗಮ್ಮ, ಸಂಗೀತಾ, ಎಂ.ಅಕ್ಷತಾ, ಕೆ.ಎಂ.ತನುಜಾ, ಅರುಣಾ, ಜಯಲಕ್ಷ್ಮಿ, ಎಚ್.ಪಿ.ಧನುಶ್ರೀ ಇತರರಿದ್ದರು.