ರೋಣ: ಬಿಸಿಲಿನ ತಾಪ ದಿನೇದಿನೆ ಹೆಚ್ಚುತ್ತಿರುವುದರಿಂದ ಹಳ್ಳ-ಕೊಳ್ಳಗಳಲ್ಲಿ ನೀರು ಖಾಲಿಯಾಗಿ ಜಲಕ್ಷಾಮ ಉಂಟಾಗಿದೆ.
ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳು ನೀರು ಮತ್ತು ಆಹಾರಕ್ಕಾಗಿ ಪರಿತಪಿಸುತ್ತ ಗ್ರಾಮಗಳತ್ತ ದಾಂಗುಡಿ ಇಡುತ್ತಿವೆ. ಈ ವೇಳೆ ಆಕಸ್ಮಿಕವಾಗಿ ವಾಹನಗಳಿಗೆ ಸಿಲುಕಿಯೋ ಅಥವಾ ನಾಯಿಗಳ ದಾಳಿಗೊಳಗಾಗಿಯೋ ಸಾವನ್ನಪ್ಪುತ್ತಿವೆ.
ಅರಣ್ಯದಂಚಿನ ಗ್ರಾಮಗಳ ಸುತ್ತಮುತ್ತ ಹೆಚ್ಚಾಗಿ ಬೆಳೆದಿರುವ ಅಕೇಶಿಯಾ ಗಿಡಗಳನ್ನು ತಿನ್ನಲು ಕೃಷ್ಣಮೃಗ, ಜಿಂಕೆಗಳು ಕಾಡು ಬಿಟ್ಟು ಬರುತ್ತಿವೆ. ಅರಣ್ಯ ಪ್ರದೇಶದಲ್ಲಿ ನೀರಿನ ಮೂಲ ಇಲ್ಲದಂತಾಗಿದೆ. ಕೆರೆ-ಹಳ್ಳ-ಕೊಳ್ಳಗಳೆಲ್ಲ ಬತ್ತಿಹೋಗಿವೆ. ಹೀಗಾಗಿ ನವಿಲು, ಕೃಷ್ಣಮೃಗ, ಜಿಂಕೆ ಸೇರಿ ಇನ್ನಿತರ ಕಾಡುಪ್ರಾಣಿಗಳು ಕಾಡಂಚಿನ ಜಮೀನುಗಳಿಗೆ ನುಗ್ಗಿ, ಅಲ್ಲಿ ಬೆಳೆದ ಬೆಳೆ ಹಾಳುಗೆಡುವುತ್ತಿವೆ.
648 ಹೆಕ್ಟೇರ್ ಅರಣ್ಯ ಪ್ರದೇಶ: ತಾಲೂಕಿನಾದ್ಯಂತ 648 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ತಾಲೂಕಿನ ನೆಲ್ಲೂರ, ಕಲ್ಲಿಗನೂರ, ಸವಡಿ, ಅಬ್ಬಿಗೇರಿ, ನರೇಗಲ್ ಗ್ರಾಮಗಳ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಜಿಂಕೆ ಮತ್ತು ಕೃಷ್ಣಮೃಗಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ 1500ಕ್ಕೂ ಹೆಚ್ಚು ಜಿಂಕೆೆ, 500 ಕ್ಕೂ ಹೆಚ್ಚು ಕೃಷ್ಣಮೃಗ ಹಾಗೂ 2000ಕ್ಕೂ ಹೆಚ್ಚು ನವಿಲುಗಳಿವೆ.
ಬಹು ವರ್ಷಗಳಿಂದ ತಾಲೂಕಿನ ಜಕ್ಕಲಿ, ಅಬ್ಬಿಗೇರಿ, ಸವಡಿ ಸೇರಿ ಸುತ್ತಲಿನ ಗ್ರಾಮಗಳ ಹಳ್ಳಗಳ ಬದಿಯಲ್ಲಿ ಸಾವಿರಾರು ಜಿಂಕೆಗಳು ವಾಸವಾಗಿವೆ. ಮಳೆ ಇಲ್ಲದ ಕಾರಣ ಹಳ್ಳದಲ್ಲಿ ನೀರಿಲ್ಲ, ಇದರಿಂದಾಗಿ ನೀರು, ಆಹಾರ ಅರಸಿ ಬರುವ ಜಿಂಕೆಗಳು ರೈತರು ಜಮಿನುಗಳಿಗೆ ದಾಳಿ ಇಡುತ್ತಿವೆ. ಈ ಸಂದರ್ಭದಲ್ಲಿ ನಾಯಿ ದಾಳಿಗೋ, ವಾಹನಗಳಿಗೆ ಸಿಲುಕಿಯೋ ಸಾಯುತ್ತಿವೆ.
| ಮಲ್ಲಣ್ಣ ಗಡಗಿ, ರೈತ ರೋಣ
ರೋಣ ತಾಲೂಕಿನಲ್ಲಿ ಜಿಂಕೆ, ಕೃಷ್ಣಮೃಗಗಳ ಸಂಖ್ಯೆ 2 ಸಾವಿರಕ್ಕೂ ಹೆಚ್ಚಿದೆ. ಈ ಭಾಗದಲ್ಲಿ ಜಿಂಕೆವನ ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಜಿಂಕೆವನ ಸ್ಥಾಪಿಸಿದರೆ ಒಳಿತಾಗುತ್ತದೆ. ಇದರಿಂದ ರೈತರ ಬೆಳೆ ಹಾನಿ ತಪ್ಪಿಸುವುದರ ಜೊತೆಗೆ ವಿನಾಕಾರಣ ಸಾವೀಡಾಗುತ್ತಿರುವ ಪ್ರಾಣಿ, ಪಕ್ಷಿಗಳ ಜೀವ ರಕ್ಷಿಸಿದಂತಾಗುತ್ತದೆ.
| ಅನ್ವರ್ ಕೋಲಕಾರ ಉಪಅರಣ್ಯಾಧಿಕಾರಿ ಪ್ರಾದೇಶಿಕ ವಲಯ, ರೋಣ ತಾಲೂಕು