ಮುಂಡರಗಿ: ತಾಲೂಕಿನ ಮಕ್ತುಂಪುರ ಗ್ರಾಮದ ಚಿಗಳ್ಳವು ಗುರುವಾರ ರಾತ್ರಿ ಸುರಿದ ಮಳೆಗೆ ಮೈತುಂಬಿ ಹರಿದ ಕಾರಣ ಹಳ್ಳದ ಪಕ್ಕದಲ್ಲಿರುವ ಸೂರ್ಯಕಾಂತಿ ರಾಶಿ ಕಣಕ್ಕೆ ಶುಕ್ರವಾರ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಸುಮಾರು ಎಂಟತ್ತು ರೈತರು ನೀರಾವರಿ ಜಮೀನಿನಲ್ಲಿ ನಾಲ್ಕು ತಿಂಗಳಿಂದ ಕಷ್ಟಪಟ್ಟು ಬೆಳೆದ ಸೂರ್ಯಕಾಂತಿ ಬೆಳೆಯನ್ನು ರಾಶಿ ಮಾಡಲು ಹಳ್ಳದ ಸಮೀಪದ ಖಾಲಿ ಜಾಗದಲ್ಲಿ ಹಾಕಿದ್ದರು. ರಾಶಿ ಕಣದ ಸುತ್ತಲೂ ಪ್ರತಿಯೊಬ್ಬ ರೈತರು ಕನಿಷ್ಠ 15ರಿಂದ 20 ಕ್ವಿಂಟಾಲ್ನಷ್ಟು ಸೂರ್ಯಕಾಂತಿ ಫಸಲನ್ನು ಸಂಗ್ರಹಿಸಿಟ್ಟಿದ್ದರು.
ಗುರುವಾರ ಸುರಿದ ಮಳೆಗೆ ಹಳ್ಳ ರಭಸದಿಂದ ಹರಿದಿದೆ. ಹಳ್ಳದ ನೀರು ರಾಶಿಗೆ ನುಗ್ಗಿದ ಕಾರಣ ಕೆಲ ರೈತರ ಸೂರ್ಯಕಾಂತಿ ರಾಶಿ ನೀರಲ್ಲಿ ಕೊಚ್ಚಿ ಹೋಗಿವೆ. ಮತ್ತೆ ಕೆಲ ರೈತರ ರಾಶಿಗೆ ತೇವಾಂಶ ಹೆಚ್ಚಳವಾಗಿದೆ. ತೇವಾಂಶ ಹೆಚ್ಚಳದಿಂದ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯುವುದಿಲ್ಲ. ಹೀಗಾಗಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮಕ್ತುಂಪೂರ ರೈತರಾದ ಹನುಮಂತ ಪೂಜಾರ, ಮುದಿಯಪ್ಪ ತಿಪ್ಪಣ್ಣವರ, ಶಿವಾನಂದ ಬರದೂರ, ದೇವಪ್ಪ ವಾಲಿಕಾರ, ಯಂಕಪ್ಪ ವಾಲಿಕಾರ, ಮಾರುತೆಪ್ಪ ತಿಪ್ಪಣ್ಣವರ, ಮಾರುತೆಪ್ಪ ಡಂಬಳ ಮನವಿ ಮಾಡಿಕೊಂಡಿದ್ದಾರೆ.