ಬಳ್ಳಾರಿ : ಇತ್ತೀಚಿನ ದಿನಗಳಲ್ಲಿ ಹೋಟಲ್ಗಳ ನಿರ್ವಹಣೆಯಲ್ಲಿ ವೃತ್ತಿಪರತೆ ಅಗತ್ಯವಿದೆ ಎಂದು ಬಿಡಿಸಿಸಿ ಜಂಟಿ ಕಾರ್ಯದರ್ಶಿ ಡಾ.ಮರ್ಚೇಡ್ ಮಲ್ಲಿಕಾರ್ಜುನ ಗೌಡ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ‘ಸ್ಕಿಲ್ ಡೆವಲಪ್ಮೆಂಟ್ ಸೆಂಟರ್’ ನೇತೃತ್ವದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ ಭಾಗವಾಗಿ ತೋರಣಗಲ್ಲು, ಹೊಸಪೇಟೆ ಮತ್ತು ಹಂಪಿಯ ಅಂತಾರಾಷ್ಟ್ರೀಯ ದರ್ಜೆಯ ವಿವಿಧ ಹೋಟಲ್ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಪ್ರಾಯೋಗಿಕ ತರಬೇತಿಯಲ್ಲಿ ಮಾತನಾಡಿದರು. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಜಿಲ್ಲೆಯ ನಿರುದ್ಯೋಗಿಗಳಿಗೆ ಹೋಟಲ್ ಮ್ಯಾನೇಜ್ಮೆಂಟ್ ಕೋರ್ಸ ತರಬೇತಿ ನೀಡಲಾಗುತ್ತಿದೆ. ಮೊದಲನೇ ಬ್ಯಾಚ್ನ ಕೌಶಲ್ಯತೆ ಆಧರಿಸಿ, ಎರಡನೇ ಬ್ಯಾಚ್ ಪ್ರಾರಂಭಿಸುತ್ತೇವೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ದರ್ಜೆಯ ತೋರಣಗಲ್ಲು ವಿದ್ಯಾನಗರ ಹೋಟಲ್ ಹಯಾತ್, ರಾಕ್ ರೀಜೆನ್ಸಿ, ಹೊಸಪೇಟೆಯ ರಾಯಲ್ ಆರ್ಕಿಡ್, ಹಂಪೆಯ ವಿಜಯಶ್ರೀ ಹೆರಿಟೇಜ್ ಮತ್ತು ದರೋಜಿಯ ಎವಾಲ್ವ್ ಬ್ಯಾಕ್ ಹೋಟಲ್ನಲ್ಲಿ ಒಟ್ಟು 33 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲಾಯಿತು.
ಹೋಟಲ್ ಹಯಾತ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ರವೀಂದ್ರನಾಥ, ತರಬೇತಿ ಅಧಿಕಾರಿಗಳಾದ ನೈಜಲ್ ನಾಯ್ಡು, ರಕ್ಷಿತ್ ಮತ್ತು ಶಂಪಾ ಅವರು, ವಿದ್ಯಾರ್ಥಿಗಳಿಗೆ ಹೋಟಲ್ನ ಕೋಣೆಗಳ ನಿರ್ವಹಣೆ, ಹೋಟಲ್ನಲ್ಲಿನ ದೈನಂದಿನ ಚಟುವಟಿಕೆಗಳು, ಗ್ರಾಹಕರೊಂದಿಗಿನ ಆತ್ಮೀಯತೆ, ಶಿಸ್ತು-ಸಂಯಮ ಮತ್ತು ಇನ್ನಿತರೆಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ತರಬೇತಿಯಲ್ಲಿ ಹೋಟಲ್ ಹಯಾತನ ಮೈಕಲ್, ರಾಯಲ್ ಆರ್ಕಿಡ್ನ ಇಬ್ರಾಹಿಂ, ಎವಾಲ್ವ್ ಬ್ಯಾಕ್ನ ಜಾನ್ಸಿ, ವಿದ್ಯಾಶ್ರೀ ರೆಸಾರ್ಟನ ತನುಶ್ರೀ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಾದ ಎರ್ರಿಸ್ವಾಮಿ ನಾಯಕ್ ಮತ್ತು ಜಿ.ಜ್ಯೋತಿ ಅವರು, ಅಂತಾರಾಷ್ಟ್ರೀಯ ದರ್ಜೆಯ ಹೋಟಲ್ಗಳಲ್ಲಿಯ ದೈನಂದಿನ ನಿರ್ವಹಣೆ, ಚಟುವಟಿಕೆಗಳ ಕುರಿತು ಸಾಕಷ್ಟು ಮಾಹಿತಿ ಸಿಕ್ಕಿದೆ. ಕೋರ್ಸ ಪೂರ್ಣಗೊಂಡ ನಂತರ ಇಲ್ಲಿಯ ವಿದ್ಯಾರ್ಥಿಗಳಿಗೆ ಉದ್ಯಮದಲ್ಲಿ ಖಂಡಿತವಾಗಿಯೂ ಅಪಾರ ಬೇಡಿಕೆ ಬರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.