ಹುಬ್ಬಳ್ಳಿ: ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರತಿಯೊಬ್ಬರೂ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿಯಮಾವಳಿಗಳನ್ನು ತಪ್ಪದೇ ಪಾಲಿಸಬೇಕು, ಲಾಕ್ಡೌನ್ ಸಮಯದಲ್ಲಿ ಮನೆಯಿಂದ ಯಾರೂ ಹೊರಗೆ ಬರಬಾರದು, ಯಾರಾದರೂ ನಿಯಮ ಉಲ್ಲಂಘಿಸಿದರೆ ಅಂಥವರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ…
ಇಲ್ಲಿಯ ಸರ್ಕ್ಯೂಟ್ ಹೌಸ್ನಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಮುಸ್ಲಿಮ್ ಹಾಗೂ ವಿವಿಧ ಸಮಾಜದ ಮುಖಂಡರ ಸಭೆಯಲ್ಲಿ ಈ ವಿಷಯ ರ್ಚಚಿಸಲಾಯಿತು.
ಕರೊನಾ ಸೋಂಕು ಅತಿ ವೇಗವಾಗಿ ಹರಡುತ್ತಿದೆ. ಈ ದಿಸೆಯಲ್ಲಿ ಎಲ್ಲರೂ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಯಾರೂ ಗುಂಪು ಸೇರಬಾರದು. ಲಾಕ್ಡೌನ್ ಆದೇಶ ಉಲ್ಲಂಘಿಸಿ ಯಾರೂ ಕೂಡ ಸಮಾಜದ ಶಾಂತಿ, ಸ್ವಾಸ್ಥ್ಯ ಹಾಳು ಮಾಡಬಾರದು. ಯಾರೋ ಒಬ್ಬರು ಮಾಡಿದ ತಪ್ಪಿಗೆ ಸಮಾಜಕ್ಕೆ ಕಳಂಕ ಬರುತ್ತದೆ ಎಂದು ಹೊರಟ್ಟಿ ತಿಳಿ ಹೇಳಿದರು.
ಎಲ್ಲರೂ ಮನೆಯಲ್ಲಿ ಇರಬೇಕು. ಅನಗತ್ಯವಾಗಿ ಹೊರಗೆ ಬರಬೇಡಿ ಎಂದು ತಮ್ಮ ತಮ್ಮ ಸಮಾಜದ ಜನರಿಗೆ, ಪರಿಚಿತರಿಗೆ ತಿಳಿ ಹೇಳುವಂತೆಯೂ ಸಭೆಯಲ್ಲಿ ತಿಳಿಸಲಾಯಿತು.
ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಮುಖಂಡರಾದ ಎ.ಎಂ. ಹಿಂಡಸಗೇರಿ, ರಾಜಾ ದೇಸಾಯಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಯೂಸೂಫ್ ಸವಣೂರ, ಅಲ್ತಾಫ್ ಹಳ್ಳೂರ, ಅಲ್ತಾಫ್ ಕಿತ್ತೂರ, ಇಸ್ಮಾಯಿಲ್ ತಮಾಟಗಾರ, ಶಿರಾಜ್ ಅಹ್ಮದ ಕುಡಚಿವಾಲೆ, ಎಂ.ಎ. ಪಠಾಣ, ಇತರರು ಪಾಲ್ಗೊಂಡಿದ್ದರು.