More

    ನಿಮ್ಮ ಋಣ ಮರೆಯಲು ಸಾಧ್ಯವಿಲ್ಲ | ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಅಭಿಮತ

    ಬಾದಾಮಿ: ಬಾದಾಮಿ ಜನರು ಬಹಳ ಒಳ್ಳೆಯರವರು. ನನ್ನ ಮೇಲೆ ವಿಶ್ವಾಸ ಇಟ್ಟು ನನಗೆ ಮತ ನೀಡಿ ಆಯ್ಕೆ ಮಾಡಿದ್ದೀರಿ. ನಿಮ್ಮ ಋಣ ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಹೇಳಿದರು.

    ಶುಕ್ರವಾರ ಪಟ್ಟಣದ ಹೊರ ವಲಯದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ 227.80 ಕೋಟಿ ರೂ. ವೆಚ್ಚದ ಬಾದಾಮಿ ಕೆರೂರ ಸೇರಿದಂತೆ 18 ಗ್ರಾಮಗಳ ಶಾಶ್ವತ ಕುಡಿಯುವ ನೀರಿನ ಯೋಜನೆ ಸೇರಿದಂತೆ ಸುಮಾರು 500 ಕೋಟಿ ರೂ. ವೆಚ್ಚದ ವಿವಿದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮತ್ತು ಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಸಿದ್ದರಾಮಯ್ಯ ಮಾತನಾಡಿದರು.

    ರಾಜಕೀಯ ಪುನರ್ಜನ್ಮ ನೀಡಿದ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಬಾದಾಮಿ ಜನರಿಗೆ ಕೋಟಿ ಕೋಟಿ ನಮಸ್ಕಾರ ಹೇಳಿದ ಸಿದ್ದರಾಮಯ್ಯ ಮಲಪ್ರಭಾ ನದಿ ದಡದ ರೈತರಿಗೆ ನೀರು ಬಿಡಿಸಿದ್ದೇನೆ. ನಾನು ಬಂದ ನಂತರ ಹೊಳೆ ಬತ್ತಿಲ್ಲ. ಬೆಳೆ ಬೆಳೆಯಲು ನಾಲೆಗೆ ನೀರು ಬಿಡಿಸಿದ್ದೇನೆ. ರೂ. 625 ಕೋಟಿ ರೂ. ವೆಚ್ಚದ ಕೆರೂರ ಏತ ನೀರಾವರಿ ಯೋಜನೆ ಜಾರಿಗೊಳಿಸಿದ್ದೇನೆ. ಕೆರೆಗಳಿಗೆ ಜೀಣೋದ್ಧಾರ, ರಸ್ತೆ ಸುಧಾರಣೆ ಮಾಡಿದ್ದೇನೆ. ಎಸ್.ಸಿ, ಎಸ್.ಟಿ. ಜನಾಂಗಕ್ಕೆ ಸುಮಾರು 250-300 ಕೋಟಿ ಅನುದಾನ ತಂದಿರುವುದಾಗಿ ಹೇಳಿದರು.

    ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನ ಬಂದಿದೆ. ಬಿಜೆಪಿ 40% ಕಮಿಷನ್ ಸರಕಾರ. ಇದನ್ನೆಲ್ಲ ತಡೆಯಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ. ನಾನು ಮುಖ್ಯಮಂತ್ರಿ ಆಗಬೇಕಾದರೆ ನೀವೆಲ್ಲ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಮನವಿ ಮಾಡಿದರು.

    ಸರಕಾರಿ ಪ್ರೌಢಶಾಲೆ ಮಕ್ಕಳು ನಾಡಗೀತೆ ಹಾಡಿದರು. ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಸ್ವಾಗತಿಸಿದರು. ಕೆಯುಡಬ್ಲೂಎಸ್ ಮುಖ್ಯ ಅಭಿಯಂತರ ಮುತ್ತುರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಮಿಕರ ಇಲಾಖೆ ವತಿಯಿಂದ ಟ್ಯಾಬ್, ಹಕ್ಕುಪತ್ರ, ಸ್ತ್ರೀಶಕ್ತಿ ಗುಂಪುಗಳಿಗೆ ಚೆಕ್ ವಿತರಣೆ ಮಾಡಿದರು.

    ಕೆರೂರ, ಗುಳೇದಗುಡ್ಡ, ಬಾದಾಮಿ ಪುರಸಭೆ ಸದಸ್ಯರಿಂದ ಬೆಳ್ಳಿ ಗದೆ ನೀಡಿ ಸನ್ಮಾನ ಮಾಡಿದರು. ಐದು ವರ್ಷದ ಸಾಧನೆಯ ಕಿರುಹೊತ್ತಿಗೆ ಪುಸ್ತಕ ಬಿಡುಗಡೆ ಮಾಡಲಾಯಿತು. ಗಿಡ್ಡನಾಯಕನಾಳ ಮತ್ತು ರಾಘಾಪೂರ ಎರಡು ಕಂದಾಯ ಗ್ರಾಮಗಳ ಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದರು.

    ಮಾಜಿ ಸಚಿವ ಎಚ್.ವೈ. ಮೇಟಿ, ಮಾಜಿ ಶಾಸಕ ಜೆ.ಟಿ. ಪಾಟೀಲ, ಆರ್.ಬಿ. ತಿಮ್ಮಾಪುರ, ಮುಖಂಡರಾದ ಹೊಳಬಸು ಶೆಟ್ಟರ್, ಭೀಮಸೇನ ಚಿಮ್ಮನಕಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts