ಕುಶಾಲನಗರ: ಸಮುದಾಯದ ಕಷ್ಟ, ಸುಖಗಳಿಗೆ ನಾಯಕರು ಸ್ಪಂದಿಸಬೇಕು ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ರಾಷ್ಟ್ರಕವಿ ಕುವೆಂಪು ಜಯಂತಿ ಮತ್ತು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಮಾಜದಲ್ಲಿ ಇಂದು ಒಡೆದು ಆಳುವ ವ್ಯವಸ್ಥೆ ವ್ಯಾಪಕವಾಗಿದೆ. ಇದರಿಂದ ಅನೇಕರು ಲಾಭ ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಮುದಾಯದವರು ಎಚ್ಚರಿಕೆ ವಹಿಸಬೇಕು ಎಂದರು. ಒಕ್ಕಲಿಗರಿಗೆ ಇಂದು ವಿಶೇಷ ಸ್ಥಾನಮಾನ ದೊರಕಿದೆ ಎಂದರೆ ಅದರ ಹಿಂದೆ ನಾಡಪ್ರಭು ಕೆಂಪೇಗೌಡ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಂಥ ಪೂಜ್ಯರ ಕೊಡುಗೆ ಸಾಕಷ್ಟಿದೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪ್ಪಳ್ಳಿ ರವೀಂದ್ರ ಮಾತನಾಡಿ, ಮಾನವರಾಗಿ ಜನಿಸಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಉನ್ನತ ವ್ಯಾಸಂಗ ಮಾಡುವುದರೊಂದಿಗೆ ಸುಸಂಸ್ಕೃತರಾಗಿ ಸಮಾಜಕ್ಕೆ ವಿಶೇಷ ಕೊಡುಗೆ ನೀಡಬೇಕು ಎಂದರು.
ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ಮನುಷ್ಯ ಮನುಷ್ಯನಂತೆ ಬಾಳಬೇಕು ಎನ್ನುವ ಸಂದೇಶ ನೀಡಿದವರು ಕುವೆಂಪು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯುವಂತಾಗಬೇಕು ಎಂದರು.
ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜಿ ಸದಸ್ಯ ಬಿ.ಬಿ.ಭಾರತೀಶ, ವಿ.ಪಿ. ಶಶಿಧರ, ತಾ.ಪಂ.ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ, ಸಂಘದ ಕುಶಾಲನಗರ ತಾಲೂಕು ಅಧ್ಯಕ್ಷ ಎಂ.ಕೆ.ದಿನೇಶ್, ಡಾ.ಹರ್ಷ, ಇತಿಹಾಸಕಾರ ಪುತ್ತೂರು ಅನಂತರಾಜ ಇತರರು ಇದ್ದರು. ಭವ್ಯ ಮತ್ತು ತಂಡದವರು ಶಿವತಾಂಡವ ನೃತ್ಯ ಪ್ರಸ್ತುತಪಡಿಸಿದರು. ಸಮುದಾಯದ ಏಳಿಗೆಗೆ ಶ್ರಮಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.