More

    ನರೇಂದ್ರ ಮೋದಿ ಆಡಳಿತ ವಿರುದ್ಧ ‘ಜನತಾ ಆರೋಪಗಳ ಪಟ್ಟಿ’ ಬಿಡುಗಡೆ

    ಮೈಸೂರು: ಜನಾಂದೋಲನಗಳ ಮಹಾಮೈತ್ರಿ, ಜನತಂತ್ರ ಪ್ರಯೋಗಶಾಲೆ, ರಾಜ್ಯ ರೈತ ಸಂಘದ ವತಿಯಿಂದ ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತದ ವಿರುದ್ಧ ‘ಜನತಾ ಆರೋಪಗಳ ಪಟ್ಟಿ’ ಬಿಡುಗಡೆ ಮಾಡಲಾಯಿತು.

    ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರತಿನಿಧಿ ಉಗ್ರ ನರಸಿಂಹೇಗೌಡ ಮಾತನಾಡಿ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿ ನೀಡಿದ ಭರವಸೆ, ಹೇಳಿಕೆಗಳನ್ನು ಈ ಕಿರು ಹೊತ್ತಿಯಲ್ಲಿ ನೀಡಲಾಗಿದೆ. ಅವರು ನೀಡಿದ ಭರವಸೆಗಳನ್ನು ಏತಕ್ಕೆ ಈಡೇರಿಸಲಿಲ್ಲ ಎಂಬುದನ್ನು ಸಹ ವಿವರಿಸಲಾಗಿದೆ ಎಂದರು.

    ಕೃಷಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ, ಕಾರ್ಮಿಕರ ಕಾಯ್ದೆಗೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು, ಕಾರ್ಮಿಕರು ಹಾಗೂ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ‘ಜನತಾ ಆರೋಪಗಳ ಪಟ್ಟಿ’ಯಲ್ಲಿ ವಿವರಿಸಲಾಗಿದೆ ಎಂದು ಹೇಳಿದರು.

    ನಗರದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಸನಾತನ ಧರ್ಮ ರಕ್ಷಣೆಯೇ ಮೋದಿ ಗ್ಯಾರೆಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಂದರೆ ವರ್ಣಾಶ್ರಮ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದೇ ಇವರ ಗುರಿಯಾಗಿದೆ. ಈ ಹೇಳಿಕೆಯಿಂದ ಇವರು ಭಾರತವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ ಎಂಬುದನ್ನು ಅರಿಯಬಹುದ. ಆರ್‌ಎಸ್‌ಎಸ್ ಆಶಯದಂತೆ ನವ ಮನುವಾದ ನಿರ್ಮಾಣ ಇವರ ಗುರಿಯಾಗಿದೆಯೇ ಹೊರತು ಸಂವಿಧಾನ ಆಶಯ ಜಾರಿಯಲ್ಲ ಎಂದು ಟೀಕಿಸಿದರು.

    ಹಿರಿಯ ಪತ್ರಕರ್ತ ಜಿ.ಪಿ. ಬಸವರಾಜು ಮಾತನಾಡಿ, ಸುಮಾರು 23 ಆರೋಪಗಳನ್ನು ಕಿರುಹೊತ್ತಿಗೆ ಒಳಗೊಂಡಿದೆ. ಇವು ಕೇವಲ ಆರೋಪಗಳಲ್ಲ, ಇವುಗಳಲ್ಲಿ ಅಂಕಿ ಅಂಶಗಳು ಇವೆ. ನಮ್ಮ ಆರ್ಥಿಕ ವ್ಯವಸ್ಥೆಯನ್ನು ಮೋದಿ ಸರ್ಕಾರ ಎಷ್ಟೊಂದು ದುರ್ಬಲಗೊಳಿಸಿದೆ,, ನ್ಯಾಯಾಂಗದ ಮೇಲೆ ಅವರು ಹೇಗೆ ಪ್ರಭಾವ ಬೀರಿದ್ದಾರೆ ಎಂಬುದನ್ನು ವಿವರಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಚಿಂತಕರಾದ ಹೊಸಕೋಟೆ ಬಸವರಾಜು, ಪ್ರೊ. ಕಾಳಚನ್ನೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts