ನರಗುಂದ: ಪಟ್ಟಣದ ದಲಾಲಿ ಅಂಗಡಿಯೊಂದರ ಗೋದಾಮಿನಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ಹಾವು ಶನಿವಾರ ಪತ್ತೆಯಾಗಿದ್ದು, ಉರಗ ರಕ್ಷಕ ಬಿ.ಆರ್. ಸುರೇಬಾನ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಪಟ್ಟಣದ ಹೊಸ ಎಪಿಎಂಸಿ ಯಾರ್ಡ್ನಲ್ಲಿರುವ ಮಹಾಂತೇಶ ಹಂಪಣ್ಣವರ ಎಂಬುವರ ದಲಾಲಿ ಅಂಗಡಿಯಲ್ಲಿ ಕಪ್ಪು ತಲೆಯ (ಬ್ಲಾಕ್ ಹೆಡೆಡ್) ವಿಷ ರಹಿತ ಹಾವು ಕಂಡು ಬಂದಿದೆ. ಇದೊಂದು ನಿಶಾಚಾರಿ ಹಾವು ಆಗಿರುವುದರಿಂದ ಹಲ್ಲಿ ಮತ್ತು ಹಾವು ರಾಣಿಗಳನ್ನು ಸೇವಿಸುತ್ತದೆ.
ಅಬ್ಬಬ್ಬಾ ಎಂದರೆ ಗರಿಷ್ಠ 18 ಇಂಚು ಮಾತ್ರ ಇದರ ಬೆಳವಣಿಗೆ. ಕಪ್ಪು ತಲೆ, ದೇಹದ ಮೇಲಿರುವ ಕಪ್ಪು ಬಣ್ಣದ ಸಣ್ಣ ಸಣ್ಣ ಚುಕ್ಕಿಗಳಿಂದ ಇದನ್ನು ಗುರುತಿಸಬಹುದಾಗಿದೆ. ಇದು ಹಗಲಿನಲ್ಲಿ ಗೋಚರಿಸಿಕೊಳ್ಳುವುದು ಅತಿ ವೀರಳ. ರಾತ್ರಿ ವೇಳೆ ಕಾಣಿಸಿಕೊಳ್ಳುವುದರಿಂದ ರಸ್ತೆ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪುತ್ತದೆ ಎಂದು ಉರಗ ತಜ್ಞ ಮಂಜುನಾಥ ನಾಯಕ್, ಉರಗರಕ್ಷಕ ಬಿ.ಆರ್. ಸುರೇಬಾನ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.