ಕೊಳ್ಳೇಗಾಲ: ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸ್ವಾವಲಂಬನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಕೊಡುಗೆ ಅಪಾರ ಎಂದು ಶಾಸಕ ಎನ್.ಮಹೇಶ್ ಹೇಳಿದರು.
ಪಟ್ಟಣದ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲಾ ಆವರಣದ ಸಾವಿತ್ರಿಬಾಯಿ ಫುಲೆ ರಂಗವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಆಯೋಜಿಸಿದ್ದ ಕೊಳ್ಳೇಗಾಲ ಎ ವಲಯದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧನಾ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ 16,000 ಸಂಘಗಳನ್ನು ರಚನೆ ಮಾಡಿದೆ. 1.26 ಲಕ್ಷ ಮಹಿಳಾ ಸದಸ್ಯರಿಗೆ ಸುಮಾರು 300 ಕೋಟಿ ರೂ. ಸಾಲ ವಿತರಣೆ ಮಾಡಿದೆ. ಸ್ತ್ರೀಯರನ್ನು ಒಗ್ಗೂಡಿಸಿಕೊಂಡು ಗ್ರಾಮೀಣ ಮಟ್ಟದಲ್ಲೇ ದೊಡ್ಡ ಆರ್ಥಿಕ ಚಟುವಟಿಕೆ ಮಾಡುತ್ತಿರುವುದು ಹೆಗ್ಗಳಿಕೆ ಎಂದರು.
ಕೊಳ್ಳೇಗಾಲ ತಾಲೂಕಿನಲ್ಲಿ 2,500 ಸಂಘ ರಚನೆಗೊಂಡಿವೆ. 25,000 ಮಹಿಳಾ ಸದಸ್ಯರಿದ್ದಾರೆ. ಸುಮಾರು 80 ಕೋಟಿ ರೂ. ಸಾಲ ನೀಡಿದೆ. ಇದ್ದರಿಂದ ಬಡ ಕುಟುಂಬಗಳು ಸ್ವಾವಲಂಬನೆ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಯೋಜನಾಧಿಕಾರಿ ಪುರುಷೋತ್ತಮ ಮಾತನಾಡಿ, ರಾಜ್ಯದಲ್ಲಿ 5 ಲಕ್ಷ ಸಂಘ ರಚನೆ ಮಾಡಿ, 60 ಲಕ್ಷ ಮಹಿಳೆಯರಿಗೆ ಸದಸ್ಯತ್ವ ನೀಡಲಾಗಿದೆ. ಪ್ರತಿ ಕುಟುಂಬವೂ ಸ್ವಾವಲಂಬಿಯಾಗಿ ಬದುಕಲಿ ಎಂಬುದು ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಅವರ ಆಶಯ ಎಂದರು.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಧರ್ಮಸ್ಥಳ ಸಂಘ ಹೆಚ್ಚು ಒತ್ತು ನೀಡುತ್ತಿದೆ. ದುರ್ಬಲ ಜನರನ್ನು ಮೇಲೆತ್ತುವ ಕೆಲಸವನ್ನು ಸಂಸ್ಥೆಯು ನಿರಂತರವಾಗಿ ಮಾಡುತ್ತಿದೆ. ಸಮಾಜಮುಖಿ ಕಾರ್ಯಕ್ರಮಗಳ ಚಿಂತನೆ ನಡೆಸುತ್ತಿದೆ ಎಂದರು.
ನಗರಸಭೆ ಅಧ್ಯಕ್ಷೆ ಸಿ.ಎನ್.ರೇಖಾ ರಮೇಶ್, ಉಪಾಧ್ಯಕ್ಷೆ ಸುಶೀಲಾ ಶಾಂತರಾಜು, ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕ ರಾಜೇಶ್ವರಿ, ಪಿಎಸ್ಐ ಚೇತನ್, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಜಿಲ್ಲಾ ನಿರ್ದೇಶಕ ಲತಾ ಬಂಗೇರಾ, ಯೋಜನಾಧಿಕಾರಿ ಪುರುಷೋತ್ತಮ ಇತರರು ಇದ್ದರು.