ಹೊಳೆಹೊನ್ನೂರು: ಸಮೀಪದ ಮೈದೊಳಲಿನಲ್ಲಿ ದೊಣ್ಣೆ ಕೆಂಚಮ್ಮ ದೇವಿ ಹಬ್ಬ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿತು. ದೇವಿಯ ಪುರ ಪ್ರವೇಶದೊಂದಿಗೆ ಪೂಜಾ ಕೈಂಕರ್ಯಗಳು ಆರಂಭವಾದವು. ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ದೇವಿಯ ಆರಾಧನೆ ಮಾಡಿದರು. ಮಹಿಳೆಯರು ದೇವಿಗೆ ಮಂಗಳಾರತಿ ಮಾಡಿ, ಮಡಿಲಕ್ಕಿ ತುಂಬಿಸಿದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ವಿರಾಜಮಾನವಾಗಿ ಕುಳಿತ ದೊಣ್ಣೆ ಕೆಂಚಮ್ಮ ದೇವಿಯ ದರ್ಶನ ಪಡೆದರು. ದೊಣ್ಣೆಕೆಂಚಮ್ಮ ದೇವಿಯ ರಾಜ ಬೀದಿ ಉತ್ಸವದೊಂದಿಗೆ ದೇವಿಯನ್ನು ವನಕ್ಕೆ ವಾಪಾಸ್ ಕಳಿಸುವುದರೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು. ತಮಟೆ, ಓಲಗ, ಅಸಾದಿ ಪದಗಳ ತಂಡದವರು ರಾಜಬೀದಿ ಉತ್ಸವಕ್ಕೆ ಮೆರಗು ನೀಡಿದವು.