ಚಿಕ್ಕಮಗಳೂರು: ಬಿಜೆಪಿ ಸರ್ಕಾರವು ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇ.ಡಿ ತನಿಖೆ ನೆಪದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿ, ಆಜಾದ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನಾ ಸಭೆ ನಡೆಸಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ರೂಪಿಸಿದ ಸಂವಿಧಾನದ ಕಾನೂನುಗಳನ್ನು ಗಾಳಿಗೆ ತೂರಲಾಗುತ್ತಿದೆ. ರಾಜಕೀಯ ದುರುದ್ದೇಶದಿಂದ ಸುಳ್ಳು ಕೇಸ್ ದಾಖಲಿಸುವುದು. ಇ.ಡಿ, ಐಟಿ, ಎಸಿಬಿ ಮೂಲಕ ದಾಳಿ ಮಾಡಿಸಿ ಬೆದರಿಕೆ ಹಾಕುವುದು ಬಿಜೆಪಿ ಸರ್ಕಾರ ಬಂದಾಗಿನಿಂದ ನಿರಂತರವಾಗಿ ನಡೆಯುತ್ತಿದೆ ಎಂದು ದೂರಿದರು.
ವಾಟ್ಸ್ಆಪ್, ಫೇಸ್ಬುಕ್ ಮೂಲಕ ಬಿಜೆಪಿ ಆಡಳಿತ ಮಾಡುತ್ತಿರುವುದು ಬಿಟ್ಟರೆ ಅವರ ಸಾಧನೆ ಶೂನ್ಯ. ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ನೀಡಿದ ಆಶ್ವಾಸನೆಗಳಲ್ಲಿ ಒಂದೂ ಈಡೇರಿಲ್ಲ. ಹೆತ್ತವರಿಗೆ ಮಾತ್ರ ಹೆರಿಗೆ ನೋವಿನ ಅರಿವಿರುತ್ತದೆ. ಬ್ರಿಟಿಷರ ಆಳ್ವಿಕೆಯಲ್ಲಿದ್ದ ದೇಶವನ್ನು ಸ್ವತಂತ್ರಗೊಳಿಸಿಕೊಟ್ಟ ಕೀರ್ತಿ ಕಾಂಗ್ರೆಸ್ ನಾಯಕರಿಗೆ ಸಲ್ಲುತ್ತದೆ. ಕೇಂದ್ರ ಸರ್ಕಾರ ದಿನಬಳಕೆ ವಸ್ತುಗಳಿಗೆ ಜಿಎಸ್ಟಿ ಹೇರಿದ್ದರಿಂದ ಬೆಲೆ ಗಗನಕ್ಕೇರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ಗಾಯತ್ರಿ ಶಾಂತೇಗೌಡ, ಜೆ.ಎಚ್.ರೇಖಾ ಹುಲಿಯಪ್ಪ ಗೌಡ, ಎಚ್.ಎಚ್.ದೇವರಾಜ್, ಡಾ. ಕೆ.ಪಿ.ಅಂಶುಮಂತ್, ಡಾ. ಡಿ.ಎಲ್.ವಿಜಯ್ಕುಮಾರ್, ಹಿರೇಮಗಳೂರು ಪುಟ್ಟಸ್ವಾಮಿ, ಶಿವಾನಂದಸ್ವಾಮಿ, ಎ.ಎನ್.ಮಹೇಶ್, ಹಂಪಾಪುರ ಮಂಜೇಗೌಡ, ಪವನ್, ಚಂದ್ರಮೌಳಿ, ಸತೀಶ್, ಬಸವರಾಜ್, ಶ್ರೀಕಾಂತ್, ಸಂತೋಷ್, ಸಂದೇಶ್, ಆನಂದ್ ಕಡೂರು, ಎಂ.ಡಿ.ರಮೇಶ್, ಜಯರಾಜ್ ಅರಸ್ ಇದ್ದರು.