More

    ದೇಶದಲ್ಲಿ ಬೆಳೆಗಳ ಮೌಲ್ಯವರ್ಧನೆ ಕಡಿಮೆ  -ಜೈಪುರದ ಅಧಿಕಾರಿ ಡಾ.ರಂಜಿತ್ ಹೇಳಿಕೆ – ಸಿರಿಧಾನ್ಯ ತರಬೇತಿ ಶಿಬಿರ

    ದಾವಣಗೆರೆ: ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೆಳೆಗಳ ಮೌಲ್ಯವರ್ಧನೆ ಅತಿ ಕಡಿಮೆಯಾಗಿದೆ. ಇದರಿಂದ ರೈತರು ಆರ್ಥಿಕ ಲಾಭ ಪಡೆಯಲು ವಿಫಲರಾಗಿದ್ದಾರೆ ಎಂದು ಜೈಪುರದ ಚೌಧರಿ ಚರಣ್‌ಸಿಂಗ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆಯ ಸಂಶೋಧನಾ ಅಧಿಕಾರಿ ಡಾ.ರಂಜಿತ್ ಹೇಳಿದರು.
    ಚೌಧರಿ ಚರಣ್ ಸಿಂಗ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆ ವತಿಯಿಂದ ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಿರಿಧಾನ್ಯಗಳ ಮೌಲ್ಯವರ್ಧನೆ, ಪ್ಯಾಕಿಂಗ್, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸಂಬಂಧಿಸಿದ ಸಂಸ್ಥೆಗಳು ರೈತರ ಕೈಹಿಡಿದು ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಬಗ್ಗೆ ತಿಳಿವಳಿಕೆ ಜತೆಗೆ ತಾಂತ್ರಿಕ ಮಾರ್ಗದರ್ಶನ ನೀಡುವುದು ಅತ್ಯವಶ್ಯಕವಾಗಿದೆ. ಇದರಿಂದ ರೈತರು ಹೆಚ್ಚಿನ ಲಾಭ ಗಳಿಸುವ ಅವಕಾಶವಿದೆ ಎಂದರು.
    ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಟಿ.ಎನ್.ದೇವರಾಜ ಮಾತನಾಡಿ ಗ್ರಾಮೀಣ ಮಹಿಳೆಯರು ಸಿರಿಧಾನ್ಯಗಳನ್ನು ಬಳಸಿ, ಮನೆಯಲ್ಲಿಯೇ ಸರಳವಾದ, ಆರೋಗ್ಯಕರ ಪದಾರ್ಥಗಳನ್ನು ತಯಾರಿಸಿ ಉಪಯೋಗಿಸಿಕೊಳ್ಳಲು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುವುದು ಎಂದರು.
    ತರಬೇತಿ ಬಳಿಕ ಮಹಿಳೆಯರು ಮೊದಲು ತಮ್ಮ ಮನೆಯಲ್ಲಿ ಮೌಲ್ಯವರ್ಧನೆ ಮಾಡಿ ಬಳಸಬೇಕು. ನಂತರದಲ್ಲಿ ನೆರೆಯ ಊರಿನ ಜನರು ಇದನ್ನು ಅನುಸರಿಸುತ್ತಾರೆ ಎಂದು ತಿಳಿಸಿದರು.
    ತರಬೇತಿಯಲ್ಲಿ ಸಿರಿಧಾನ್ಯಗಳ ಉತ್ಪಾದನಾ ತಾಂತ್ರಿಕತೆ, ಪೋಷಕಾಂಶಗಳು, ಸಿರಿಧಾನ್ಯಗಳ ಲಡ್ಡು, ಅವಲಕ್ಕಿ, ರವೆ, ಇಡ್ಲಿ ಮತ್ತು ಬಿಸ್ಕತ್ತು ಮುಂತಾದವುಗಳನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು ಹಾಗೂ ಸಿರಿಧಾನ್ಯ ಮೌಲ್ಯವರ್ಧನೆಯಲ್ಲಿ ತೊಡಗಿರುವ ಗ್ರಾಮೀಣ ಉದ್ದಮೆದಾರರ ಜತೆ ಸಂವಾದ ನಡೆಸಲಾಯಿತು. ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ತರಬೇತಿಯಲ್ಲಿ 78 ಗ್ರಾಮೀಣ ಮಹಿಳೆಯರು ಭಾಗಿಯಾಗಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts