ಬೆಳಗಾವಿ: ಟಿಳಕವಾಡಿಯ ಗೋಗಟೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಕನ್ನಡಪರ ಹೋರಾಟಗಾರ ಸಂಪತ್ಕುಮಾರ್ ಕಾಲೇಜಿಗೆ ಬಂದು ಕನ್ನಡ ಮತ್ತು ಮರಾಠಿ ವಿವಾದ ಎಬ್ಬಿಸಿದ್ದಾರೆ ಎಂದು ಆರೋಪಿಸಿರುವ ಕರ್ನಾಟಕ ದಲಿತ ಸಂಘ ಸಮಿತಿ ಪದಾಧಿಕಾರಿಗಳು, ಸಂಪತ್ಕುಮಾರ್ ದೇಸಾಯಿ ಹಾಗೂ ಶ್ರೇಯಸ್ ಮಳ್ಳಿಮಠ ಇತರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದಿದ್ದ ವಿದ್ಯಾರ್ಥಿ ಮೊದಲು ಅವಾಚ್ಯವಾಗಿ ನಿಂದಿಸಿ ದಲಿತ ವಿದ್ಯಾರ್ಥಿ ಸುಮಿತ್ ಕಾಂಬಳೆ ಕಾಲು ತುಳಿದಿದ್ದಕ್ಕೆ ಆ ವಿದ್ಯಾರ್ಥಿಗೆ ಹಲ್ಲೆ ಮಾಡಲಾಗಿದೆ. ವೈಯಕ್ತಿಕ ಕಾರಣಕ್ಕೆ ಈ ಹಲ್ಲೆಯಾಗಿತ್ತೇ ವಿನಃ ಕನ್ನಡ ಬಾವುಟವನ್ನು ಎತ್ತಿ ಹಿಡಿದಿದ್ದಕ್ಕೆ ಅಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕನ್ನಡಿಗರು ಮತ್ತು ಮರಾಠಿಗರ ನಡುವೆ ವೈಮನಸ್ಸು ಮೂಡುವಂತೆ ಮಾಡಿದ ಸಂಪತ್ಕುಮಾರ್ ಹಾಗೂ ಇತರರ ಮೇಲೆ ಕ್ರಮ ಕೈಗೊಳ್ಳುವಂತೆ ಹೋರಾಟಗಾರರು ಒತ್ತಾಯ ಮಾಡಿದರು.
ಹಲವು ಬಾರಿ ದಲಿತ ಎಂದು ಸಹಪಾಠಿ ವಿದ್ಯಾರ್ಥಿ ನಿಂದಿಸಿದ್ದ. ಕಾಲೇಜು ಕಾರ್ಯಕ್ರಮದಲ್ಲೂ ಅವಾಚ್ಯವಾಗಿ ನಿಂದಿಸಿದ್ದಕ್ಕೆ ಹಲ್ಲೆ ಮಾಡಿದ್ದಾನೆ. ಈಗ ಹಾಕಿರುವ ಪ್ರಕರಣ ವಾಪಸ್ ಪಡೆದುಕೊಳ್ಳಲಿ ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಮಹಾಂತೇಶ ತಳವಾರ, ಮಲ್ಲೇಶ ಚೌಗಲೆ, ರಾಯಪ್ಪ ಕಾಂಬಳೆ, ಸಂತೋಷ ಕಾಂಬಳೆ, ಮನೋಹರ ಅಜ್ಜನಕಟ್ಟಿ ಇತರರು ಪ್ರತಿಭಟನೆಯಲ್ಲಿದ್ದರು.
ಜಾತಿ ಬಣ್ಣ ಪಡೆದುಕೊಂಡ ಪ್ರಕರಣ?
ಕಾಲೇಜಿನಲ್ಲಿ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಬಾವುಟವನ್ನು ಪ್ರದರ್ಶನ ಮಾಡಿದ್ದಕ್ಕೆ ಇತರೆ ಕೆಲ ವಿದ್ಯಾರ್ಥಿಗಳಿಂದ ನಡೆದಿದ್ದ ಹಲ್ಲೆ ಪ್ರಕರಣವು ಈಗ ಜಾತಿ ಬಣ್ಣಕ್ಕೆ ತಿರುಗಿದೆ. ಹಲ್ಲೆ ಮಾಡಿದ ಆರೋಪಿ ದಲಿತ ವಿದ್ಯಾರ್ಥಿ ಬೆಂಬಲಕ್ಕೆ ದಲಿತ ಪರ ಸಂಘಟನೆಗಳು ನಿಂತಿದ್ದು, ಪ್ರತಿಭಟನೆ ಆರಂಭಿಸಿವೆ.