ನರಗುಂದ: ತಾಲೂಕಿನಾದ್ಯಂತ ಭಾನುವಾರ ಸಿಡಿಲು-ಬಿರುಗಾಳಿ ಸಹಿತ ಭಾರಿ ಮಳೆ ಸುರಿಯಿತು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಆರಂಭವಾದ ಮಳೆ ಸುಮಾರು ಮೂರು ತಾಸು ಅಬ್ಬರಿಸಿತು. ಇದರಿಂದ ಪಟ್ಟಣದ ಕೆಲ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಮಳೆ ಆರ್ಭಟಕ್ಕೆ ಜನತೆ ತತ್ತರಿಸಿದ್ದಾರೆ.
ಮಳೆಯಿಂದ ಪಟ್ಟಣದ ಗುಡ್ಡದ ಬಳಿಯಿರುವ ಕೃಷ್ಣಾನಗರ ಬಡಾವಣೆಯ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಕುಟುಂಬ ಸದಸ್ಯರೆಲ್ಲರೂ ಮಳೆಯ ನೀರನ್ನು ಹೊರಹಾಕಲು ತುಂಬಾ ಹರಸಾಹಸ ಪಡಬೇಕಾಯಿತು. ತಾಲೂಕಿನ ಹದ್ಲಿ ಗ್ರಾಮದ ಬಳಿಯಿರುವ ಜಾಲಿಹಳ್ಳದ ಸೇತುವೆಯೂ ಭಾರಿ ಮಳೆಯಿಂದ ತುಂಬಿ ಹರಿಯಿತು. ಪರಿಣಾಮ ಎರಡ್ಮೂರು ಗಂಟೆ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.
ಸ್ಮಾರಕ ಭವನಕ್ಕೆ ಸಿಡಿಲು?
ಕರ್ನಾಟಕದ ಕೇಸರಿ ಎಂದೇ ಖ್ಯಾತಿ ಹೊಂದಿದ್ದ ದಿ. ಜಗ್ನನಾಥರಾವ್ ಜೋಷಿ ಅವರ ಸ್ಮಾರಕ ಭವನಕ್ಕೆ ಸಿಡಿಲು ಬಡಿದು ನಾಲ್ಕೈದು ಅಡಿಯಷ್ಟು ಗೋಡೆ ಬಿರುಕು ಬಿಟ್ಟಿದೆ ಎಂಬ ಸಂದೇಶ ಕೆಲ ವಾಟ್ಸ್ಆಪ್, ಫೇಸ್ಬುಕ್ ಗ್ರುಪ್ಗಳಲ್ಲಿ ಹರಿದಾಡಿದವು. ಆದರೆ, ಈ ಕುರಿತು ಆರೆಸ್ಸೆಸ್ ಪ್ರಮುಖ ಸಂಜೀವ ನಲವಡೆ ಪ್ರತಿಕ್ರಿಯಿಸಿ, ಸ್ಮಾರಕ ಭವನಕ್ಕೆ ಯಾವುದೇ ಸಿಡಿಲು ಬಡಿದಿಲ್ಲ. ಬದಲಿಗೆ ವಿಪರೀತ ಮಳೆ-ಗಾಳಿ ಏಕಕಾಲಕ್ಕೆ ಆರಂಭವಾಗಿದ್ದರಿಂದ ಈ ಮೊದಲೇ ಬಿರುಕು ಬಿಟ್ಟಿದ್ದ ಮೇಲ್ಮಹಡಿಯ ಸ್ವಲ್ಪ ಗೋಡೆ ಉದುರಿ ಬಿದ್ದಿದೆ ಎಂದು ತಿಳಿಸಿದರು.
ಧರೆಗುರುಳಿದ ಗಿಡ-ಮರ
ಮುಂಡರಗಿ: ತಾಲೂಕಿನ ಮುರುಡಿ ಭಾಗದಲ್ಲಿ ಭಾನುವಾರ ಸಂಜೆ ಉತ್ತಮ ಮಳೆ ಸುರಿದು ಇಳೆ ತಂಪಾಗಿದೆ. ಬಿರುಗಾಳಿ ಸಮೇತ ಸುರಿದ ಮಳೆಗೆ ಮುರುಡಿ ಮತ್ತು ಬಾಗೇವಾಡಿ ಗ್ರಾಮದಲ್ಲಿ ಗಿಡ-ಮರಗಳು ಧರೆಗುರುಳಿವೆ. ಕೆಲ ಮನೆಗಳ ತಗಡು ಗಾಳಿಗೆ ಕಿತ್ತು ಹೋಗಿವೆ. ಮುರುಡಿ ಗ್ರಾಮದಲ್ಲಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಈಗಾಗಲೇ ಕೆಲವಡೆ ಹೆಸರು ಬಿತ್ತನೆ ಮಾಡಿದ್ದು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ.