ತಿಪಟೂರು: ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಮತ್ತು ಸಮಾಜದೊಂದಿಗೆ ಕೈಜೋಡಿಸದ ಇತರ ಇಲಾಖೆ ಅಧಿಕಾರಿಗಳಿಗೆ ಶಾಸಕ ಬಿ.ಸಿ.ನಾಗೇಶ್ ಮಾನವೀಯತೆಯ ಪಾಠ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಕರೊನಾದಿಂದ ತಾಲೂಕಿನಲ್ಲಿ 37 ಮಂದಿ ಸೋಂಕಿತರ ಪೈಕಿ 25ಮಂದಿಗೆ ನೆಗೆಟಿವ್ ಬಂದಿದ್ದು, ಒಬ್ಬರು ಮೃತಪಟ್ಟು, 11ಮಂದಿ ಚಿಕಿತ್ಸೆಪಡೆಯುತ್ತಿದ್ದಾರೆ. ಜಿಲ್ಲಾಮಟ್ಟಕ್ಕೆ ಹೋಲಿಸಿದರೆ ತಾಲೂಕಿನಲ್ಲಿ ಸೋಂಕಿತರ ಪ್ರಮಾಣ ಕಡಿಮೆ ಇದೆ. ಸೋಂಕು ನಿಯಂತ್ರಿಸುವಲ್ಲಿ ತಾಲೂಕಿನ ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಮತ್ತು ಸ್ಥಳೀಯ ನಗರಸಭೆ ಶಕ್ತಿ ಮೀರಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಯಾವುದೇ ವ್ಯಕ್ತಿಯಲ್ಲಿ ಕರೊನಾ ಪಾಸಿಟಿವ್ ಬಂದ ತಕ್ಷಣ ಇಡೀ ಬಡಾವಣೆಯನ್ನು ಸೀಲ್ಡೌನ್ ಮಾಡಲಾಗುತ್ತಿದ್ದು, ಇದರಿಂದ ಅಕ್ಕ, ಪಕ್ಕದ ಬಡ ನಿವಾಸಿಗಳ ಜೀವನೋಪಾಯಕ್ಕೆ ತೊಂದರೆಯಾಗಿದೆ. ಆದರಿಂದ ಇದರ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದು, ಇನ್ನು ಮುಂದೆ, ಸೋಂಕಿತ ವ್ಯಕ್ತಿಯ ಮನೆಯ ಅಕ್ಕ,ಪಕ್ಕದ ಎರಡು ಮನೆಗಳಿಗೆ ಮಾತ್ರ ಸೀಲ್ಡೌನ್ ಇರಲಿ, ಅನವಶ್ಯವಾಗಿ ಇಡೀ ಬಡಾವಣೆ ಕಂಟೈನ್ಮೆಂಟ್ ಮಾಡುವುದು ಬೇಡ ಎಂದು ಸೂಚಿಸಿದರು.
ಅಪಘಾತದಲ್ಲಿ ಮೃತಪಡುತ್ತಿರುವ ಅನೇಕ ಮಂದಿಯ ವಾಹನಗಳಿಗೆ ವಿಮೆ ಇಲ್ಲದಿರುವುದು ದೊಡ್ಡ ದುರಂತ, ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ನಾಲ್ವರ ಪೈಕಿ ಯಾರೊಬ್ಬ ವಾಹನಗಳಿಗೂ ವಿಮೆ ಇರದ ಕಾರಣ ಅವರ ಕುಟುಂಬಕ್ಕೆ ನಯಾಪೈಸೆ ಪರಿಹಾರ ಬಂದಿಲ್ಲ. ಬಡತನ ಕಿತ್ತು ತಿನ್ನುತ್ತಿರುವ ಇಂತಹ ಕುಟುಂಬಗಳ ಸ್ಥಿತಿ ಶೋಚನೀಯವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಸಾರಿಗೆ ಮತ್ತು ಪೊಲೀಸ್ ಇಲಾಖೆ ಜವಾಬ್ದಾರಿ ಎಂದರು. ಡಿವೈಎಸ್ಪಿ ಎನ್.ಚಂದನ್ ಕುಮಾರ್, ತಹಸೀಲ್ದಾರ್ ಆರ್.ಜಿ.ಚಂದ್ರಶೇಖರ್, ವೃತ್ತ ನಿರೀಕ್ಷಕಿ ಜಯಲಕ್ಷ್ಮಮ್ಮ ಮತ್ತಿತರರಿದ್ದರು.
ತಾಲೂಕಿನ 1554 ಗರ್ಭಿಣಿಯರ ಪೈಕಿ 519 ಮಂದಿಗೆ ಸಹಜ ಹೆರಿಗೆ ಆಗಿದ್ದು, 797 ಮಂದಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸುಸಜ್ಜಿತ ಮಕ್ಕಳು ಮತ್ತು ತಾಯಂದಿರ ವಾರ್ಡ್ ಪ್ರತ್ಯೇಕವಾಗಿ ನಿರ್ಮಿಸಲಾಗಿದೆ.
ಬಿ.ಸಿ.ನಾಗೇಶ್ ಶಾಸಕರು, ತಿಪಟೂರು