More

    ತಾಲೂಕು ಕಚೇರಿಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ

    ಮದ್ದೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಹಾಡಹಗಲೇ ವ್ಯಕ್ತಿಯೊಬ್ಬ ಎದುರುದಾರನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.
    ತಾಲೂಕಿನ ಕೊಪ್ಪ ಹೋಬಳಿಯ ಮರಳಿಗ ಗ್ರಾಮದ ಚನ್ನರಾಜು (45) ಹಲ್ಲೆ ಗೊಳಗಾದವರು. ಅದೇ ಗ್ರಾಮದ ನಂದನ್ ಎಂಬಾತ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.


    ಘಟನೆ ವಿವರ: ಮರಳಿಗ ಗ್ರಾಮದ ಜಮೀನೊಂದಕ್ಕೆ ಸಂಬಂಧಿಸಿದಂತೆ ಕೆಲವು ವರ್ಷಗಳಿಂದ ಪ್ರಕರಣ ಪಟ್ಟಣದ ತಹಸೀಲ್ದಾರ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಅದಕ್ಕೆ ಸಂಬಂಧಿಸಿದಂತೆ ಇಬ್ಬರು ಎದುರುದಾರರಾದ ಚನ್ನರಾಜು ಹಾಗೂ ನಂದನ್ ಮಂಗಳವಾರ ಪಟ್ಟಣದ ತಾಲೂಕು ಕಚೇರಿಯಲ್ಲಿರುವ ನ್ಯಾಯಾಲಯದ ಹೊರಗೆ ಕಲಾಪ ಇನ್ನೂ ಆರಂಭಗೊಳ್ಳದ ಹಿನ್ನೆಲೆಯಲ್ಲಿ ಕಾಯುತ್ತಿದ್ದರು.


    ಈ ವೇಳೆ ನಂದನ್ ಚನ್ನರಾಜು ಕಣ್ಣಿಗೆ ಖಾರದ ಪುಡಿ ಎರಚಿ ಏಕಾಏಕಿ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾದಾದ. ತಾಲೂಕು ಕಚೇರಿ ಒಂದನೇ ಮಹಡಿಯಿಂದ ತಾಲೂಕು ಕಚೇರಿಯ ಆವರಣವರೆಗೆ ಅಟ್ಟಾಡಿಸಿಕೊಂಡು ಬಂದಿದ್ದಾನೆ. ಈ ವೇಳೆ ಚನ್ನರಾಜು ಕೆಳಗೆ ಬಿದ್ದರು. ಈ ವೇಳೆ 20ಕ್ಕೂ ಹೆಚ್ಚು ಬಾರಿ ಮಚ್ಚಿನಿಂದ ಹಲ್ಲೆ ನಡೆಸಿದ್ದರಿಂದ ತೀವ್ರ ರಕ್ತಸ್ರಾವದಿಂದ ಚನ್ನರಾಜು ಕುಸಿದು ಬೀಳುತ್ತಿದ್ದಂತೆಯೇ ಅಲ್ಲಿದ್ದ ಸಾರ್ವಜನಿಕರು ಸಮಯಪ್ರಜ್ಞೆ ಮೆರೆದು ಹಲ್ಲೆಕೋರನಿಗೆ ಕಲ್ಲಿನಿಂದ ಹೊಡೆದು ಪೊಲೀಸರಿಗೆ ಒಪ್ಪಿಸಿದರು.


    ಕತ್ತು ಸೇರಿದಂತೆ ಇತರ ಭಾಗಕ್ಕೆ ತೀವ್ರ ಗಾಯಗಳಾಗಿರುವುದರಿಂದ ಚನ್ನರಾಜು ಸ್ಥಿತಿ ಗಂಭೀರವಾಗಿದೆ. ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯದ ಮಿಮ್ಸ್‌ಗೆ ದಾಖಲು ಮಾಡಲಾಗಿದೆ.ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾಸ್ಪತ್ರೆಗೆ ಎಸ್ಪಿ ಯತೀಶ್ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.

    ಕೊಲ್ಲುವ ಬೆದರಿಕೆ ಹಾಕಿದ್ದ: ತಾಲೂಕು ಕಚೇರಿಯಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಹಲ್ಲೆಗೊಳಗಾದ ಚನ್ನರಾಜು ಪತ್ನಿ ಪದ್ಮಮ್ಮ ಮಾತನಾಡಿ, ಮಂಗಳವಾರ ತಹಸೀಲ್ದಾರ್ ಕೋರ್ಟ್ ಇದ್ದ ಕಾರಣ ತಾಲೂಕು ಕಚೇರಿ ಬಂದಿದ್ದೆವು. ನಮಗೂ ಜಮೀನಿನಲ್ಲಿ ಪಾಲು ಬರಬೇಕು ಎಂದು ನಂದನ್ ಕೋರ್ಟ್‌ಗೆ ಕೇಸ್ ಹಾಕಿದ್ದ. ನನ್ನ ಮಗಳನ್ನು ನಮ್ಮ ವಿರೋಧದ ನಡುವೆಯೇ ನಂದನ್ ಸೇರಿ 6 ಜನರು ಬೇರೊಬ್ಬನ ಜತೆ ಮದುವೆ ಮಾಡಿಸಿದ್ದರು. ಅಲ್ಲಿಂದ ನಮಗೂ ಅವರ ನಡುವೆ ದ್ವೇಷ ಬೆಳೆದಿತ್ತು. ಈ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ನಮ್ಮನ್ನು ಕೊಲ್ಲುವುದಾಗಿ ನಂದನ್ ಬೆದರಿಕೆ ಹಾಕಿದ್ದ ಎಂದರು.


    ಈ ಬಗ್ಗೆ ಅವರ ವಿರುದ್ಧ ದೂರು ನೀಡಿದ್ದೆವು. ಈಗಲೂ ಕೇಸ್ ನಡೆಯುತ್ತಿದೆ. ನಮಗೂ, ಅವನಿಗೂ ಸಂಬಂಧ ಇಲ್ಲ, ಹೀಗಿದ್ದರೂ ಜಮೀನು ನನಗೆ ಬರಬೇಕೆಂದು ಕೇಸ್ ಹಾಕಿದ್ದ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts