ಚಿತ್ರದುರ್ಗ: ತರಕಾರಿ, ಹಣ್ಣು ಮಾರಾಟ ಮಾಡುವ ಮೂಲಕ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಅನೇಕ ಅತಿಥಿ ಉಪನ್ಯಾಸಕರು ಸೋಮವಾರವೂ ಮುಂದುವರೆಸಿದ ಪ್ರತಿಭಟನೆ 19ನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ಸರ್ಕಾರದ ನಡೆಯ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಸ್ಪಂದನೆ ಸಿಗುವವರೆಗೂ ಹೋರಾಟ ನಿಲ್ಲದು. ಸೇವೆ ಕಾಯಂಗೊಳಿಸದಿದ್ದರೆ, ತರಕಾರಿ ಮಾರಾಟದಿಂದ ಜೀವನ ನಡೆಸಲು ಸಿದ್ಧರಿದ್ದೇವೆ ಎಂದು ಸ್ಪಷ್ಟ ಸಂದೇಶ ಸರ್ಕಾರಕ್ಕೆ ರವಾನಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಜಿ.ಎನ್.ಯಶೋಧರ ಮಾತನಾಡಿ, ನಿಮ್ಮಗಳ ಕುರಿತು ಕಾಳಜಿ ಇದೆ ಎನ್ನುತ್ತಿದೆಯೇ ಹೊರತು ಸರ್ಕಾರ ಕಾಯಂಗೊಳಿಸಲು ತೀರ್ಮಾನ ಪ್ರಕಟಿಸುತ್ತಿಲ್ಲ. ತರಗತಿ ಬಹಿಷ್ಕಾರದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಅವರ ಭವಿಷ್ಯ ದೃಷ್ಟಿಯಿಂದಲಾದರೂ ಉತ್ತಮ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೂ ಯಾವುದೇ ಸ್ಪಂದನೆ ಈವರೆಗೂ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪದಾಧಿಕಾರಿಗಳಾದ ವಿ.ಎಸ್.ಮಂಜುನಾಥ, ಜಗದೀಶ್, ಗುರುಸ್ವಾಮಿ, ದಾಕ್ಷಾಯಿಣಿ, ನಂದಿನಿ, ಎಚ್.ಮಧು, ಆಶಾ, ದಯಾನಂದ ಇತರರಿದ್ದರು.